ಬೆಂಗಳೂರು: ಶುಕ್ರವಾರ ತಮಿಳುನಾಡು ಬಂದ್ಗೆ ಹಿನ್ನೆಯಲ್ಲಿ ಸಿಎಂ ಸಿದ್ದರಾಮಯ್ಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಪತ್ರ ಬರೆದು ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಸಿಎಂ ಬರೆದ ಪತ್ರ ಕನ್ನಡ ಭಾಷಾಂತರ ಇಲ್ಲಿದೆ.
15-09-2016
ಪ್ರೀತಿಯ ಜಯಲಲಿತಾ ಅವರೇ,
ನೀವು ಸೆಪ್ಟೆಂಬರ್ 12ರಂದು ಬರೆದ ಪತ್ರ ನನಗೆ ತಲುಪಿದೆ. ರಾಜ್ಯದಲ್ಲಿರುವ ಎಲ್ಲ ಜನರಿಗೆ ರಕ್ಷಣೆ ನೀಡಲು ಸರ್ಕಾರ ಕಟಿಬದ್ಧವಾಗಿದೆ. ಸೆಪ್ಟೆಂಬರ್ 12ರಂದು ಬರೆದ ಪತ್ರದಲ್ಲಿ ನಾನು ತಮಿಳುನಾಡಿನಲ್ಲಿ ಕನ್ನಡ ಭಾಷಿಕರ ಮೇಲಿನ ಹಲ್ಲೆ ವಿಚಾರವನ್ನು ಪ್ರಸ್ತಾಪಿಸಿದ್ದೆ. ಈ ಘಟನೆ ಕರ್ನಾಟಕದ ಶಾಂತಿ ಕದಡಿದೆ. ಆದರೆ ನಾವು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದರೂ ಇಲ್ಲಿ ಹಿಂಸಾಚಾರ ನಡೆದಿದೆ. ಆದರೂ ಹಿಂಸಾಚಾರವನ್ನು ಕೆಲ ಗಂಟೆಯಲ್ಲೇ ನಾವು ನಿಯಂತ್ರಿಸಿದ್ದೇವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹಳಷ್ಟು ಜನರ ಮೇಲೆ ಪ್ರಕರಣ ದಾಖಲಿಸಿದ್ದು ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡು ಮುಂದೆ ಹಿಂಸಾಚಾರ ಸಂಭವಿಸದಂತೆ ನೋಡಿಕೊಂಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಾನು ಸೂಚನೆಯನ್ನು ನೀಡಿದ್ದೇನೆ.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ಈಗ ಕೋರ್ಟ್ ಮತ್ತು ಕಾವೇರಿ ಮೇಲುಸ್ತುವಾರಿ ಮಂಡಳಿಯಲ್ಲಿರುವಾಗ ಬಂದ್ ಮತ್ತು ಯಾವುದೇ ಹಿಂಸಾಚಾರ ನಡೆದರೆ ಯಾರಿಗೂ ಲಾಭವಿಲ್ಲ.
ತಮಿಳುನಾಡಿನಲ್ಲಿ ನಾಳೆ ಕೆಲವು ಸಂಘಟನೆಗಳು ಬಂದ್ಗೆ ಕರೆ ನೀಡಿರುವ ವಿಚಾರ ತಿಳಿದು ನನಗೆ ಕಳವಳವಾಗಿದೆ. ಈ ವೇಳೆ ಎರಡು ರಾಜ್ಯಗಳ ಜನರ ನಡುವೆ ವೈರತ್ವ ಬೆಳೆದರೆ ಇದರಿಂದ ಎರಡೂ ರಾಜ್ಯಗಳಿಗೆ ಹಾನಿಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ನಿಮ್ಮಲ್ಲಿ ನಡೆಯುವ ಬಂದ್ ವೇಳೆ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆಲ್ಲದೆ ತಮಿಳುನಾಡಿನಲ್ಲಿರುವ ಕನ್ನಡಿಗರ ಜೀವ ರಕ್ಷಣೆ ಹಾಗೂ ಅವರ ಆಸ್ತಿ ಪಾಸ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
ಕಾವೇರಿ ಪ್ರತಿಭಟನೆಗೆ ಸಂಬಂಧಿಸಿದಂತೆ ವರದಿಗಾರಿಕೆ ಮಾಡುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿನ ಮಾಧ್ಯಮಗಳಿಗೆ ಸಲಹೆ ನೀಡಿದ್ದೇವೆ. ನೀವೂ ತಮಿಳುನಾಡಿನಲ್ಲಿ ಇದೇ ರೀತಿ ಮಾಡಬೇಕು. ನಿಮ್ಮ ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ನಮ್ಮ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ನಾನು ಸೂಚನೆ ನೀಡಿದ್ದೇನೆ. ನಿಮ್ಮ ಅಧಿಕಾರಿಗಳಿಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸಲಹೆ ಸೂಚನೆ ನೀಡಿ ಎಂದು ಮನವಿ ಮಾಡುತ್ತೇನೆ.
ಧನ್ಯವಾದಗಳೊಂದಿಗೆ,
ನಿಮ್ಮ ವಿಶ್ವಾಸಿ,
[ಸಿದ್ದರಾಮಯ್ಯ]
The post ತಮಿಳುನಾಡು ಬಂದ್ ವೇಳೆ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಸಿಎಂ appeared first on Kannada Public tv.