– ಹಣ ಖರ್ಚಾದ ಮೇಲೆ ಕಿಡ್ನ್ಯಾಪ್ ಆಗಿದ್ದೀವಿ ಅಂತ ರೀಲ್ ಬಿಟ್ರು
ಬೆಂಗಳೂರು: ಓದೋದಕ್ಕೆ ಇಷ್ಟವಿಲ್ಲದ ಮಕ್ಕಳು ಮನೆಯನ್ನ ಬಿಟ್ಟು ಹೋಗಿ ಕಿಡ್ಯ್ನಾಪ್ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ. ಬಿಡದಿ ಬಳಿಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಆರು ಮಕ್ಕಳು ಮನೆಯಿಂದ ಹಣ ಕದ್ದು ಗುರುವಾರ ಪಾಂಡಿಚೇರಿಗೆ ಹೋಗಿದ್ರು.
ಆದ್ರೆ ಹಣ ಖರ್ಚಾದ ಮೇಲೆ ಅವರಿಗೆ ಅಪ್ಪ, ಅಮ್ಮ ಮನೆ ಎಲ್ಲಾ ನೆನಪಾಗಿದೆ. ಆದ್ರೆ ಹಣ ಕದ್ದು ಹೋಗಿದ್ವಿ ಅಂದ್ರೆ ಮನೆಯವ್ರು ನಮ್ಮನ್ನ ಹಣ್ಣುಗಾಯಿ ನೀರುಗಾಯಿ ಮಾಡ್ತಾರೆ ಅಂತ ಈ ಚಾಲಾಕಿ ಮಕ್ಕಳಿಗೆ ಗೊತ್ತಿತ್ತು. ಆದಕ್ಕೆ ಒಂದು ಖತರ್ನಾಕ್ ಪ್ಲಾನ್ ಮಾಡಿ ಕೆಎಸ್ಆರ್ಟಿಸಿ ಬಸ್ ಚಾಲಕನ ಬಳಿ ಹೋಗಿ ನಮ್ಮನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಅಂತ ರೀಲ್ ಬಿಟ್ಟಿದ್ದಾರೆ. ಇದನ್ನ ನಂಬಿದ ಚಾಲಕ ಅಶೋಕ್ ಅಯ್ಯೋ ಪಾಪ ಅಂತ ಮಕ್ಕಳನ್ನ ಬೆಂಗಳೂರಿಗೆ ಕರೆತಂದಿದ್ದಾನೆ.
ಕಿಡ್ನ್ಯಾಪ್ ಅಂತ ಈ ಮಕ್ಕಳು ಹೇಳಿದ್ರಿಂದ ಅವರ ತಂದೆ ತಾಯಿ ಪೊಲೀಸ್ರಿಗೆ ದೂರು ಕೊಟ್ಟಿದ್ರು. ಪೊಲೀಸ್ರು ವಿಚಾರಣೆ ಮಾಡಿದ ಬಳಿಕ ಈ ಹುಡುಗರ ನಿಜವಾದ ಬಂಡವಾಳ ಬಯಲಾಯ್ತು. ತಂದೆ ತಾಯಿ ನಮ್ಮನ್ನ ಓದೋದಕ್ಕೆ ಹಿಂಸೆ ಮಾಡ್ತಿದ್ದಾರೆ ಅದಕ್ಕೇ ಕಿಡ್ನ್ಯಾಪ್ ನಾಟಕ ಆಡಿದ್ದು ಅಂತ ಮಕ್ಕಳು ಒಪ್ಪಿಕೊಂಡಿದ್ದಾರೆ. ಸದ್ಯ ಕಿಡ್ನ್ಯಾಪ್ ನಾಟಕವಾಡಿದ್ದ ವಿನೋದ್, ಕಿಶೋರ್, ಸೌಮ್ಯ ಸೇರಿದಂತೆ ಎಲ್ಲಾ ಆರು ಮಕ್ಕಳು ಸೇಫಾಗಿ ಮನೆ ಸೇರಿದ್ದು ತಂದೆ ತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.