– ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ಅಮ್ಮ, ಮಗ
– ಜ್ಯೋತಿಷಿ ನಿರಂಜನ್ ಭಟ್ ನಾಪತ್ತೆ, ಪೊಲೀಸರಿಂದ ಶೋಧ
ಉಡುಪಿ: ಡೈವೋರ್ಸ್ ನೀಡಿದರೆ ತನ್ನ ಹೆಸರಿನಲ್ಲಿದ್ದ ಆಸ್ತಿಯೆಲ್ಲ ಪತಿಗೆ ಸೇರುತ್ತದೆ ಎನ್ನುವ ಒಂದೇ ಕಾರಣಕ್ಕೆ ಪತಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿರುವುದಾಗಿ ಪತ್ನಿ ರಾಜೇಶ್ವರಿ ಪೊಲೀಸ್ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಭಾಸ್ಕರ್ ಶೆಟ್ಟಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಉಡುಪಿ ಪೊಲೀಸರು ಮತ್ತೊಮ್ಮೆ ಪತ್ನಿ ರಾಜೇಶ್ವರಿ ಮತ್ತು ಮಗ ನವನೀತ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದ್ದು ಇದೀಗ ಐಪಿಸಿ ಸೆಕ್ಷನ್ 302, 201, 120(ಬಿ), 204ರ ಅಡಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದು, ಕೊಲೆಗೆ ಸಹಕರಿಸಿ ಈಗ ನಾಪತ್ತೆಯಾಗಿರುವ ನಿರಂಜನ್ ಭಟ್ಗೆ ಶೋಧ ಕಾರ್ಯ ಆರಂಭಗೊಂಡಿದೆ.
ಡೈವೋರ್ಸ್ಗೆ ಕೊಲೆ: ಕಳೆದ ಒಂದು ವರ್ಷದಿಂದ ರಾಜೇಶ್ವರಿ ಶೆಟ್ಟಿಗೂ ನಂದಳಿಕೆಯ ನಿರಂಜನ್ ಭಟ್ಟನಿಗೂ ಅನ್ಯೋನ್ಯತೆ ಬೆಳೆದು ತುಂಬಾನೆ ಸಲುಗೆಯಿಂದ ಇದ್ದರು. ಈ ವಿಷಯವು ಭಾಸ್ಕರ ಶೆಟ್ಟಿಗೆ ಗೊತ್ತಾಗಿ ರಾಜೇಶ್ವರಿ ಶೆಟ್ಟಿಯ ಮೇಲೆ ಸಿಟ್ಟಾಗಿದ್ದರು. ಇಬ್ಬರ ಸಂಬಂಧದಿಂದ ಬೇಸರಗೊಂಡಿದ್ದ ಭಾಸ್ಕರ್ ಶೆಟ್ಟಿ ಪತ್ನಿ ಜೊತೆ ಡೈವೋರ್ಸ್ ನೀಡುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಆಸ್ತಿಯಲ್ಲಿ ಹೆಂಡತಿ ಯಾವುದೇ ಪಾಲನ್ನು ನೀಡದೇ, ತನ್ನ ಎಲ್ಲಾ ಆಸ್ತಿಯನ್ನು ತನ್ನ ತಾಯಿಯ ಮನೆಯ ಕಡೆಯವರಿಗೆ ವಿಲ್ ಬರೆದಿಡಲು ನಿರ್ಧರಿಸಿದ್ದರು.
ಕೊಲೆಗೆ ಸ್ಕೆಚ್: ವಿಲ್ ನಿರ್ಧಾರದಿಂದ ಕಂಗೆಟ್ಟ ರಾಜೇಶ್ವರಿ ಪತಿಯನ್ನು ಕೊಲೆ ಮಾಡಿದರೆ ಭಾಸ್ಕರ್ ಶೆಟ್ಟಿಯ ಎಲ್ಲಾ ಆಸ್ತಿಯು ತನಗೆ ಮತ್ತು ತನ್ನ ಮಗನಿಗೆ ಸಿಗುತ್ತದೆ ಎಂದು ತಿಳಿದು ಸ್ಕೆಚ್ ಹಾಕುತ್ತಾರೆ. ಈ ಕೊಲೆ ಸ್ಕೆಚ್ಗೆ ನಿರಂಜನ್ ಭಟ್ ಸಹಾಯ ಮಾಡಲು ಮುಂದಾಗುತ್ತಾನೆ. ಇದರಂತೆ ಜುಲೈ 28 ಸಂಜೆ 4 ಗಂಟೆಗೆ ಭಾಸ್ಕರ್ ಶೆಟ್ಟಿಯನ್ನು ಅವರ ನಿವಾಸದಲ್ಲೇ ಕೊಲೆ ಮಾಡಿ ನಿರಂಜನ್ ಮನೆಯಲ್ಲಿರುವ ಹೋಮಕುಂಡಕ್ಕೆ ಮೃತದೇಹವನ್ನು ತಂದು ಸುಟ್ಟು ಹಾಕಿದ್ದರು.
ಏನಿದು ನಾಪತ್ತೆ ಕೇಸ್?
ಸುಮಾರು 20 ವರ್ಷದ ದಾಂಪತ್ಯ ನಡೆಸಿದ ದಂಪತಿಯ ಊರಿನ ಆಸ್ತಿಗಳೆಲ್ಲಾ ಪತ್ನಿ ರಾಜೇಶ್ವರಿ ಹೆಸರಲ್ಲಿತ್ತು. ದುಬೈನ ಆಸ್ತಿಗಳೆಲ್ಲವೂ ಭಾಸ್ಕರ್ ಶೆಟ್ಟಿ ಹೆಸರಲ್ಲಿತ್ತು. ಆದರೆ ಇವರಿಬ್ಬರ ಸಂಬಂಧ ಹದಗೆಟ್ಟಿದ್ದಕ್ಕೆ ಸಾಕ್ಷಿಯಾಗಿ ಜುಲೈ 28ರಂದು ಪತ್ನಿಯ ಹೆಸರಲ್ಲಿದ್ದ ಆಸ್ತಿಯನ್ನು ಭಾಸ್ಕರ ಶೆಟ್ಟಿ ಹೆಸರಿಗೆ ವರ್ಗಾಯಿಸಲು ಸಿದ್ಧತೆ ನಡೆದಿತ್ತು. ಆದರೆ ಅಂದು ಮಧ್ಯಾಹ್ನ ಭಾಸ್ಕರ ಶೆಟ್ಟಿ ಕಿಡ್ನಾಪ್ ಆಗಿದ್ದರು.
ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದರೂ ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಯಾವುದೇ ದೂರು ನೀಡಿರಲಿಲ್ಲ. ಕೊನೆಗೆ ಜುಲೈ 31ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಗುಲಾಬಿ ಅವರು ನನ್ನ ಮಗ ಭಾಸ್ಕರ್ ಹಾಗೂ ಸೊಸೆ ನಡುವೆ ಸಂಬಂಧ ಚೆನ್ನಾಗಿರಲಿಲ್ಲ. ಹಣಕಾಸು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಗಲಾಟೆಗಳಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಾಪತ್ತೆ ದೂರು ದಾಖಲಿಸಿದ ಉಡುಪಿ ಪೊಲೀಸರು ಆಗಸ್ಟ್ 2, 3, 4ರಂದು ರಾಜೇಶ್ವರಿ ಹಾಗೂ ನವನೀತ್ನನ್ನು ವಿಚಾರಣೆ ಮಾಡಿದ್ದರು. ಈ ವೇಳೆಯೂ ಪತ್ನಿ ಕೃತ್ಯ ನಡೆಸಿರುವ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಭಾಸ್ಕರ್ ಶೆಟ್ಟಿ ಸೌದಿ ಅರೇಬಿಯಾಗೆ ಹೋಗಿರಬಹುದು ಎಂದು ಸುಳ್ಳು ಹೇಳಿದ್ದರು. ಇದನ್ನೇ ಸತ್ಯವೆಂದು ನಂಬಿ ಪೊಲೀಸರು ಇವರಿಬ್ಬರನ್ನೂ ಬಿಟ್ಟಿದ್ದರು.
ಕಿಡ್ನಾಪ್ಗೆ ಟ್ವಿಸ್ಟ್: ನಾಪತ್ತೆ ಕೇಸ್ ದಾಖಲಾಗುತ್ತಿದ್ದಂತೆ ಭಾಸ್ಕರ್ ಶೆಟ್ಟಿ ಸಂಬಂಧಿಕರು ಬೆಳ್ಮಣ್ ಸಮೀಪದ ನಂದಳಿಕೆಯ ಜ್ಯೋತಿಷಿಯೊಬ್ಬರ ಜೊತೆಗೆ ರಾಜೇಶ್ವರಿ ಜೊತೆಗಿದ್ದ ಸಂಬಂಧ ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ಆ ಕಡೆಯಿಂದ ಆರಂಭವಾಯಿತು. ಆದರೆ ಘಟನೆ ನಡೆದ ದಿನದಿಂದ ಜ್ಯೋತಿಷಿ ಭಟ್ ಭಟ್ ಕಣ್ಮರೆಯಾಗಿರುವನ್ನು ಕಂಡು ತಾಯಿ ಮಗನನ್ನು ಮತ್ತೊಮ್ಮೆ ತೀವ್ರ ತನಿಖೆಗೆ ಒಳಪಡಿಸಿದಾಗ ಸತ್ಯ ಇದೀಗ ಹೊರಬಂದಿದೆ.
ಭಾಸ್ಕರ್ ಶೆಟ್ಟಿ 200 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದು ಸೌದಿ ಅರೇಬಿಯಾದಲ್ಲಿ 6 ಸೂಪರ್ ಮಾರ್ಕೆಟ್ಗಳನ್ನು ಸ್ಥಾಪಿಸಿದ್ದರು. ಭಾಸ್ಕರ್ ಶೆಟ್ಟಿಗೆ ಉಡುಪಿ ನಗರದಲ್ಲಿ ಎರಡು ಬಹು ಮಹಡಿ ಕಟ್ಟಡಗಳ ಮಾಲೀಕರೂ ಆಗಿದ್ದರು.
ಅಪ್ಪನನ್ನು ಒದಿದ್ದ: ಭಾಸ್ಕರ್ ಶೆಟ್ಟಿ ಸೌದಿ ಅರೇಬಿಯಾದಿಂದ ಬರುವ 10 ದಿನಕ್ಕೂ ಮುನ್ನ ಪುತ್ರ ನವನೀತ್ ಉಡುಪಿಯಲ್ಲಿ ಜಿಮ್ ಸೆಂಟರ್ ಓಪನ್ ಮಾಡಿದ್ದಾನೆ. ಇದರ ಉದ್ಘಾಟನೆಯ ಮೇಲುಸ್ತುವಾರಿಯನ್ನು ನಿರಂಜನ್ ಭಟ್ ವಹಿಸಿಕೊಂಡಿದ್ದ. ಒಂದು ತಿಂಗಳ ಹಿಂದೆ ಭಾಸ್ಕರ ಶೆಟ್ಟಿ ಊರಿಗೆ ಬಂದಿದ್ದಾಗ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಮಗ ನವನೀತ್ ಒಂದು ತಿಂಗಳ ಹಿಂದೆ ಕಾಲಿನಿಂದ ಒದ್ದಿದ್ದ.
The post ಡೈವೋರ್ಸ್ ಕೇಳಿದ್ದಕ್ಕೆ 200 ಕೋಟಿ ಆಸ್ತಿಗಾಗಿ ದುಬೈ ಉದ್ಯಮಿ ಕೊಲೆ appeared first on Kannada Public tv.