ತುಮಕೂರು: 10 ತಾಲ್ಲೂಕುಗಳನ್ನು ಒಳಗೊಂಡ ತುಮಕೂರು ಜಿಲ್ಲೆ ರಾಜ್ಯದ ಅತಿದೊಡ್ಡ 2ನೇ ಜಿಲ್ಲೆ. 2 ರಾಷ್ಟ್ರೀಯ ಹೆದ್ದಾರಿಗಳು ಇದೇ ತುಮಕೂರು ಮೂಲಕವೇ ಹಾದು ಹೋಗುತ್ತವೆ. ಹಾಗಾಗಿ ಇಲ್ಲಿ ದಿನವೊಂದಕ್ಕೆ ಸರಾಸರಿ 10 ರಿಂದ 15 ಅಪಘಾತದ ಕೇಸುಗಳು ಬರುತ್ತವೆ. ಇದರಲ್ಲಿ 6 ರಿಂದ 7 ಕೇಸುಗಳು ತಲೆಗೆ ಪೆಟ್ಟು ಬಿದ್ದವರೇ ಇರುತ್ತಾರೆ. ಅದನ್ನು ಪರೀಕ್ಷಿಸಿ ಚಿಕಿತ್ಸೆ ಕೊಡಲು ಮುಖ್ಯವಾಗಿ ಬೇಕಾದ ಸಿಟಿ ಸ್ಕ್ಯಾನ್ ಈ ದೊಡ್ಡ ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲ.
ಹೌದು. ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ ತುಮಕೂರು. ಆದರೆ ಜಿಲ್ಲಾಸ್ಪತ್ರೆ ಮಾತ್ರ ರೋಗಗ್ರಸ್ಥವಾಗಿದೆ. ತಜ್ಞ ವೈದ್ಯರುಗಳ ಕೊರತೆ ಒಂದೆಡೆಯಾದರೆ, ಅಪಘಾತವಾದಾಗ ಮುಖ್ಯವಾಗಿ ತಲೆಗೆ ಪೆಟ್ಟಾಗಿರುವ ಕೇಸುಗಳಿಗೆ ಸಿಟಿ ಸ್ಕ್ಯಾನ್ ಮತ್ತು ಎಮ್ಆರ್ಐ ಸ್ಕ್ಯಾನಿಂಗ್ ಮಿಷನ್ಗಳಿಲ್ಲ. ಹೀಗಾಗಿ ಪಕ್ಕದ ಬೆಂಗಳೂರು ಅಥವಾ ಖಾಸಗೀ ಲ್ಯಾಬ್ಗಳಿಗೆ ಹೋಗಬೇಕು. ಅಲ್ಲಿ ಇಲ್ಲಿ ಎನ್ನುವಷ್ಟೊತ್ತಿಗೆ ಅಪಘಾತವಾದ ವ್ಯಕ್ತಿ ಉಳಿಯುವುದೇ ಕಷ್ಟದ ಸ್ಥಿತಿಗೆ ಬಂದಿರುತ್ತದೆ. ಇದನ್ನು ಸಂಬಂಧಪಟ್ಟ ಸಚಿವರುಗಳಿಗೆ ಬಂದ ಶಸ್ತ್ರಚಿಕಿತ್ಸಾ ತಜ್ಞರೆಲ್ಲಾ ಹೇಳಿದ್ದಾರೆ.
ಈ ಹಿಂದೆ ಸಚಿವರಾಗಿದ್ದ ಯು.ಟಿ ಖಾದರ್ ಅವರೂ ಸಹ ಜಿಲ್ಲಾಸ್ಪತ್ರೆಗೆ ಭೇಟಿನೀಡಿದ್ದರು. ಆಗ ಶೀಘ್ರದಲ್ಲಿ ಸಿಟಿಸ್ಕ್ಯಾನ್ ಮತ್ತು ಎಮ್ಆರ್ಐ ಅಳವಡಿಸುವ ಭರವಸೆ ನೀಡಿದ್ದರು. ಅವರ ಬಳಿಕ ಬಂದ ರಮೇಶ್ ಕುಮಾರ್ ಕೂಡಾ ಇತ್ತೀಚೆಗೆ ಭೇಟಿನೀಡಿ ಅದೇ ಮಾತುಗಳನ್ನಾಡಿದ್ದಾರೆ. ಆದರೆ ಮುಖ್ಯವಾದ ಆ ಎರಡು ಯಂತ್ರಗಳು ಬರಲೇ ಇಲ್ಲ. ಹೀಗಾಗಿ ತುಮಕೂರು ಜಿಲ್ಲಾಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ ಎನ್ನುವಂತಾಗಿದೆ.
ಪ್ರತಿದಿನ 10-15 ಅಪಘಾತದ ಕೇಸುಗಳು ಬಂದರೆ, ಹೊರ ರೋಗಿಗಳ ಸಂಖ್ಯೆ 1200 ರಿಂದ 1500. ಇಷ್ಟಿದ್ದರು ಕಳೆದ 60 ವರ್ಷಗಳಿಂದ ಜಿಲ್ಲಾಸ್ಪತ್ರೆ ಮಾತ್ರ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿದೆ. ಆಸ್ಪತ್ರೆ ಅಭಿವೃದ್ದಿ ತಡವಾದರೂ ಪರವಾಗಿಲ್ಲ. ಸಿಟಿ ಸ್ಕ್ಯಾನ್ ಮತ್ತು ಎಮ್ಆರ್ಐ ಸ್ಕ್ಯಾನಗಳ ಜೊತೆಗೆ ಅಗತ್ಯ ತಜ್ಞ ವೈದ್ಯರುಗಳನ್ನು ಸರ್ಕಾರ ಅತೀ ಮುಖ್ಯವಾಗಿ ಒದಗಿಸಬೇಕಾಗಿದೆ.