ಉಡುಪಿ: ಆ ಕುಟುಂಬಕ್ಕೆ ದಿಕ್ಕೂ ಇಲ್ಲ. ದೆಸೆಯೂ ಗೊತ್ತಿಲ್ಲ. ಮನೆಯೊಳಗಿದ್ದ ಮೂವರೂ ಮಾನಸಿಕವಾಗಿ ಕುಗ್ಗಿ ಹೋದವರು. ಉಡುವ ಬಟ್ಟೆ, ತಿನ್ನುವ ಅನ್ನದ ಬಗ್ಗೆಯೂ ಪರಿವೇ ಇಲ್ಲ. ಸ್ನಾನ, ಶೌಚಾ ಮತ್ತೊಂದು ಎಲ್ಲವೂ ಮನೆಯೊಳಗೆಯೇ…
ಇದು ಉಡುಪಿಯ ಚೇರ್ಕಾಡಿ ಮೂಲದ ವೇದಾವತಿಯವರ ಕುಟುಂಬದ ಕಥೆಯಿದು. 10 ವರ್ಷದ ಹಿಂದೆ ಮನೆಯ ಬೆನ್ನೆಲುಬಾಗಿದ್ದ ರತ್ನಾಕರ ಸಾವನ್ನಪ್ಪಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಕುಟುಂಬಕ್ಕೆ ತನ್ನವರು ಎಂಬುವವರಿಲ್ಲ. ಇರುವವರು ಇವರನ್ನು ದೂರವಿಟ್ಟಿದ್ದಾರೆ. ಮನೆ- ಮನಸ್ಸುಗಳ ನಡುವೆ ಹುಲ್ಲು- ಗಿಡ ಗಂಟಿಗಳು ಬೆಳೆದಿದೆ. ಸಂಬಂಧಗಳು ಕೆಟ್ಟುಹೋಗಿದೆ.
ವೇದಾವತಿಗೆ ರಾಘವೇಂದ್ರ- ಭವ್ಯ ಎಂಬ ಮಕ್ಕಳು. ಮಾನಸಿಕ ಅಸ್ವಸ್ಥರೋ- ಅಥವಾ ಮನೆಯ ನಾಲ್ಕು ಗೋಡೆಗಳ ನಡುವೆ ವರ್ಷಾನುಗಟ್ಟಲೆ ಕಳೆದು ಮಾನಸಿಕ ಅಸ್ವಸ್ಥರಾದರೋ ಗೊತ್ತಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಈ ಕತ್ತಲೆ ಕೂಪದೊಳಗೆ ದಿನ ದೂಡುತ್ತಿದ್ದಾರೆ. ಊರಿನ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ.
ಸ್ಥಳೀಯರು- ಸಮಾಜ ಸೇವಕರು ಈ ಕುಟುಂಬವನ್ನೊಮ್ಮೆ ಮನಶಾಸ್ತ್ರಜ್ಞರಲ್ಲಿ ಚಿಕಿತ್ಸೆ ಕೊಡಿಸಿದ್ದರು. ಎರಡು ತಿಂಗಳ ಕಾಲ ಕೌನ್ಸೆಲಿಂಗ್ ಮಾಡಿಸಿದ್ದರು. ಇದಾಗಿ ಮೂವರು ಕೊಂಚ ಜನರೊಂದಿಗೆ ಸ್ಪಂದಿಸಿದ್ದರು. ಒಂದು ವರ್ಷ ಕಳೆದಿದ್ದು, ಮನಸ್ಸು ಮತ್ತೆ ಹಾಗೆಯೇ ಆಗಿದೆ. ಎಲ್ಲಾದರೂ ಹೋಗಬೇಕೆಂದರೆ ರಾಘವೇಂದ್ರನನ್ನ ಕೂಡಿ ಹಾಕಿ ಹೋಗುತ್ತಾರೆ. ಆದ್ರೆ ರಾಘವೇಂದ್ರ ನಾನು ಹೊರಗೆ ಬರಬೆಕು. ಕೆಲಸ ಮಾಡಬೇಕು ಅಂತ ಪಬ್ಲಿಕ್ ಟಿವಿಯ ಮುಂದೆ ಕೇಳಿಕೊಂಡಿದ್ದಾರೆ.
ಸುದ್ದಿ ಮಾಡಲು ಹೋದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸ್ಪಂದಿಸಿದ್ದಾರೆ, ಬೆಳಕು ಕಾರ್ಯಕ್ರಮದ ಹೆಸರು ಕೇಳಿದ ಕೂಡಲೇ ಬೆಳೆದಿದ್ದ ಹುಲ್ಲುಗಂಟಿಗಳನ್ನು ತೆರವುಗೊಳಿಸಿದ್ದಾರೆ. ಮನೆ ಬೀಳುವ ಸ್ಥಿತಿಯಲ್ಲಿದೆ. ಅದಕ್ಕೊಂದು ವ್ಯವಸ್ಥೆ ಆಗಬೇಕಿದೆ. ಮನೆಗೊಂದು ಶೌಚಾಲಯ ಬೇಕಾಗಿದೆ. ರಾತ್ರಿಯೆಲ್ಲಾ ಕತ್ತಲಲ್ಲೇ ಕಳೆಯುವ ಕುಟುಂಬಕ್ಕೆ ಬೆಳಕಿನ ನಿರೀಕ್ಷೆಯಿದೆ. ನಮ್ಮ ನಿಮ್ಮೆಲ್ಲರ ಜೊತೆ ಇರುವ ಇವರು ಸಂಬಂಧಗಳಿಂದ ದೂರಾಗಿದ್ದಾರೆ. ಈ ಕುಟುಂಬ ಸಮಾಜದೊಂದಿಗೆ, ನೆರೆಕರೆಯವರು ಈ ಕುಟುಂಬದೊಂದಿಗೆ ಬೆರೆತರೆ ಇವರೂ ಎಲ್ಲರಂತಾಗುತ್ತಾರೆ.