ಮುಂಬೈ: ನ್ಯಾಯಾಲಯಗಳಲ್ಲಿ ಸಾಕ್ಷಿ ಹೇಳುವ ಮುನ್ನ ದೇವರ ಹೆಸರಲ್ಲಿ ಪ್ರಮಾಣ ಮಾಡುವುದು ನಾಸ್ತಿಕರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಭಾರತ ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಬೇಕೆಂದು ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
1969ರ ಪ್ರಮಾಣ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ಮುನ್ನ ಧಾರ್ಮಿಕ ಪುಸ್ತಕದ ಮೇಲೆ ಕೈಯ್ಯಿಟ್ಟು ನಾನು ಸತ್ಯವನ್ನೇ ಹೇಳುತ್ತೇನೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡುವುದು ನಿಯಮ.
ಆದರೆ ಪುಣೆ ಮೂಲದ ದಂಪತಿ ಸುನಿಲ್ ಮಾನೆ ಮತ್ತು ಲಕ್ಷ್ಮೀಕಾಂತ ಈ ನಿಯಮದಲ್ಲಿ ವಿನಾಯಿತಿ ಕೋರಿ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ. ನಮಗೆ ದೇವರ ಮೇಲೆ ನಂಬಿಕೆಯಿಲ್ಲ. ಆದರೂ ಪುಣೆಯ ಜಿಲ್ಲಾ ನ್ಯಾಯಾಲಯ ಮತ್ತು ಮಹಾರಾಷ್ಟ್ರದ ಬಿವಾಂಡಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪ್ರಕರಣಗಳ ವಿಚಾರಣೆ ವೇಳೆ ದೇವರ ಬದಲು ಭಾರತ ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅನುಮತಿ ಕೋರಿದ್ದೆವು. ಆದರೆ ಇದಕ್ಕೆ ಅಧಿಕಾರಿಗಳು ನಿರಾಕರಿಸಿದರು. ದೇವರ ಮೇಲೆ ನಂಬಿಕೆ ಇಲ್ಲದವರು ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಬೇಕು ಎಂದು ಈ ದಂಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿ ಭಿವಾಂಡಿ ಮುನ್ಸಿಪಲ್ ಕಾರ್ಪೋರೇಷನ್ನ ಅಧಿಕಾರಿಯೊಬ್ಬರು ಕೂಡ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನ ಕೆಲವೇ ದಿನಗಳಲ್ಲಿ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
The post ದೇವರ ಬದಲು ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಿ; ಹೈಗೆ ಅರ್ಜಿ appeared first on Public TV.