ಮಹೇಶ್ ದೇವಶೆಟ್ಟಿ
ಸುದೀಪ್ ಮೇನಿಯಾ ಇಡೀ ದೇಶದ ತುಂಬಾ ಆರಂಭವಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಯಾಕೆಂದರೆ ಈಗಾಗಲೇ ತೆಲುಗಿನ ಈಗ ಚಿತ್ರದ ಮೂಲಕ ಅವರು ದೇಶದಲ್ಲಿ ಹೆಸರು ಮಾಡಿದ್ದಾರೆ. ಆದರೆ ಈ ಬಾರಿ ಮತ್ತೆ ಅಂಥದ್ದೇ ಕ್ರೇಜ್ ಹುಟ್ಟು ಹಾಕುವ ಲಕ್ಷಣ ಕಾಣಿಸುತ್ತಿದೆ.
ವರುಷಗಳು ಕಳೆದಂತೆ ಸುದೀಪ್ ಕೇವಲ ಕನ್ನಡದ ಕಂದನಾಗಿ ಉಳಿದಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಚಿತ್ರಗಳು ಈಗ ಪರಭಾಷೆಗಳಲ್ಲೂ ಬಿಡುಗಡೆಯಾಗುತ್ತಿವೆ. ಅದಕ್ಕೆಲ್ಲ ಕಾರಣವಾಗಿದ್ದು ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರ. ಆ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು ಸುದೀಪ್.
ಅದು ತಮಿಳಿನಲ್ಲಿ ನಾನಿ ಹೆಸರಿನಲ್ಲಿ ರಿಲೀಸ್ ಆಯಿತು. ಅದಕ್ಕೂ ಹಿಂದೆ ತೆಲುಗಿನಲ್ಲಿ ‘ರಕ್ತ ಚರಿತ್ರ’ ಚಿತ್ರದಲ್ಲಿ ನಟಿಸಿದ್ದರು. ‘ಫೂಂಕ್’ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಹೆಸರೇನೊ ಬಂತು. ಆದರ ‘ಈಗ’ ಚಿತ್ರಕ್ಕೆ ದಕ್ಕಿದ ಕ್ರೆಡಿಟ್ ಸಿಕ್ಕಿರಲಿಲ್ಲ. ಯಾವಾಗ ಈಗ ಬಂದಿತೊ ಸುದೀಪ್ ಹವಾ ದಕ್ಷಿಣ ಭಾರತದಲ್ಲಿ ಜೋರಾಗಿ ಹಬ್ಬಿತು.
ಈಗ ಚಿತ್ರ ಹಿಂದಿಯಲ್ಲೂ ಡಬ್ ಆಗಿ ರಿಲೀಸ್ ಆಯಿತು. ಬಾಲಿವುಡ್ನಲ್ಲೂ ಕಿಚ್ಚನ ಹಂಗಾಮಾ ಜೋರಾಗಿಯೇ ನಡೆಯಿತು. ಅದೊಂದು ಚಿತ್ರದಿಂದ ಸುದೀಪ್ ಸಿನಿ ಕರಿಯರ್ನ ದಿಕ್ಕೇ ಬದಲಾಯಿತು. ಜೊತೆಗೆ ಎಲ್ಲಾ ಕಡೆಯಿಂದ ಪ್ರಶಂಸೆಯ ಸುರಿಮಳೆ ದಕ್ಕಿತು. ಘಟಾನುಘಟಿ ಹೀರೊ ಹೀರೊಯಿನ್ಗಳು, ನಿರ್ದೇಶಕರು ಸುದೀಪ್ ಅಭಿನಯಕ್ಕೆ ಫಿದಾ ಆದರು.
ಮಹೇಶ್ ಬಾಬು, ಜೂ.ಎನ್ಟಿಆರ್, ಪವನ್ ಕಲ್ಯಾಣ್, ಸಮಂತಾ, ಅನುಷ್ಕಾ ಶೆಟ್ಟಿ, ತಮನ್ನಾ, ನಾಗಾರ್ಜುನ್, ವೆಂಕಟೇಶ್ ಎಲ್ಲರೂ ಕಿಚ್ಚನನ್ನು ಹೊಗಳಿದ್ದೇ ಹೊಗಳಿದ್ದು. ವಿ ವಿ ವಿನಾಯಕ್ರಂಥ ನಿರ್ದೇಶಕರು ಕಿಚ್ಚನ ಜೊತೆ ಸಿನಿಮಾ ಮಾಡಲು ಉತ್ಸಾಹ ತೋರಿಸಿದರು. ಎಲ್ಲರಿಗಿಂತ ಮುಂದೆ ಬಂದು ಬೆನ್ನು ತಟ್ಟಿದ್ದು ತಲೈವಾ ರಜನಿಕಾಂತ್. “ನಾನೇ ಎಲ್ಲರಿಗಿಂತ ಬೆಸ್ಟ್ ವಿಲನ್ ಅಂತ ಅಂದುಕೊಂಡಿದ್ದೆ. ಆದರೆ ಈಗ ಚಿತ್ರವನ್ನು ನೋಡಿದ ಮೇಲೆ ನನ್ನ ಅನಿಸಿಕೆ ಸುಳ್ಳೆಂದು ಗೊತ್ತಾಯಿತು. ನಿಮ್ಮಂಥ ಕಲಾವಿದ ನಮ್ಮ ಜೊತೆಗೆ ಇದ್ದಾನೆ ಅನ್ನೋದೆ ನಮಗೆ ಹೆಮ್ಮೆ. ಒಂದಿಲ್ಲ ಒಂದು ದಿನ ನೀವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತೀರಿ” ಕಬಾಲಿ ರಜನಿಕಾಂತ್ ಸುದೀಪ್ರನ್ನು ಹೊಗಳಿದ್ದರು.
ಯಾವಾಗ ರಜನಿ ಹಾಗೆ ಹೇಳಿದರೊ ಸುದೀಪ್ಗೆ ಕೋಟಿ ತೂಕದ ಕಿರೀಟ ಬಂದು ಬಿಟ್ಟಿತು. ಆದರೆ ಸುದೀಪ್ ಕಾಲು ಈಗಲೂ ನೆಲದ ಮೇಲೆಯೇ ಇದೆ. ಯಾಕೆಂದರೆ ಅವರು ಗೆಲುವು ಬಂದಾಗ ಹಿಗ್ಗಲಿಲ್ಲ, ಸೋಲು ಬಂದಾಗ ಕುಗ್ಗಲಿಲ್ಲ. ಅದಕ್ಕಾಗಿಯೇ ಇಂದಿಗೂ ಅವರು ಒಂದೊಂದೇ ಚಿತ್ರದಿಂದ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ. ಈಗ ಮತ್ತೊಮ್ಮೆ ದೇಶದಲ್ಲಿ ಹಂಗಾಮ ಎಬ್ಬಿಸಲು ಹೊರಟಿದ್ದಾರೆ.
ತೆಲುಗಿನ ‘ಈಗ’ ಚಿತ್ರದ ನಂತರ ಸುದೀಪ್ ನಟನೆಯ ಕೋಟಿಗೊಬ್ಬ ದೇಶೆದೆಲ್ಲೆಡೆ ರಿಲೀಸ್ ಆಗಿದೆ. ಸೆಪ್ಟೆಂಬರ್ 2 ಅಂದರೆ ಇಂದು ಕಿಚ್ಚನ ಹುಟ್ಟು ಹಬ್ಬ. ಹೀಗಾಗಿ ಇಂದು ದೇಶದೆಲ್ಲೆಡೆ ಚಿತ್ರ ರಿಲೀಸ್ ಆಗಿದೆ. ಇಪ್ಪತ್ತು ದಿನಗಳ ಹಿಂದೆ ಕೋಟಿಗೊಬ್ಬ 2 ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ರಿಲೀಸ್ ಆಯಿತು. ಅಷ್ಟು ದಿನಗಳಲ್ಲಿ ಇದು ಗಳಿಸಿದ್ದು ಭರ್ತಿ 25 ಕೋಟಿ ರೂ. ಖುದ್ದು ಹಂಚಿಕೆದಾರರೇ ಇದನ್ನು ಪತ್ರಕರ್ತರ ಮುಂದೆ ಹೇಳಿಕೊಂಡರು. ಕೇವಲ ಒಂದು ವಾರದಲ್ಲಿ ಚಿತ್ರವನ್ನು ಕೊಂಡವರಿಗೆ ದುಡ್ಡು ಬಂದಿತ್ತು. ಸೂರಪ್ಪ ಬಾಬು ರಿಲೀಸ್ಗೂ ಮುನ್ನವೇ ಮಾರಿ ಬಿಟ್ಟಿದ್ದರು.
ಒಟ್ಟಿನಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ನಿರ್ದೇಶನದ ಇದು ತಮಿಳಿನಲ್ಲೂ ಸೂಪರ್ ಹಿಟ್ ಆಯಿತು. ಅಲ್ಲಿಗೆ ಸುದೀಪ್ ಮೇನಿಯ ಎಲ್ಲಾ ಕಡೆ ಹಬ್ಬಲು ಶುರುವಾಯಿತು. ಇಪ್ಪತ್ತು ದಿನಗಳಲ್ಲಿ 25 ಕೋಟಿ ಗಳಿಸಿದ್ದನ್ನು ನೋಡಿ ಹಂಚಿಕೆದಾರರು ಈ ಚಿತ್ರವನ್ನು ದೇಶದ ಬೇರೆ ಬೇರೆ ಕಡೆ ರಿಲೀಸ್ ಮಾಡಲು ಮುಂದಾಗಿದ್ದಾರೆ. ಮಹಾರಾಷ್ಟ್ರ, ಕೊಲ್ಕೊತ್ತಾ, ತೆಲಂಗಾಣ ಸೇರಿದಂತೆ ಹಲವು ಕಡೆ ಚಿತ್ರ ರಿಲೀಸ್ ಆಗಿದೆ.
ಮುಂಬೈ, ಪೂನಾ, ಕೊಲ್ಕೊತ್ತಾ, ತೆಲಂಗಾಣದ ಮಲ್ಟಿಫ್ಲೆಕ್ಸ್ ಸೇರಿದಂತೆ ಹಲವಾರು ಥೇಟರ್ಗಳಲ್ಲಿ ಸುದೀಪ್ ಹವಾ ಶುರುವಾಗಲಿದೆ. ಅಂದ ಹಾಗೆ ತೆಲಂಗಾಣದಲ್ಲಿ ಒಟ್ಟು ಹನ್ನೊಂದು ಥೇಟರ್ಗಳಲ್ಲಿ ರಿಲೀಸ್ ಆಗಿದೆ. ಮಲಯಾಳಂ, ತೆಲುಗು ಮತ್ತು ಭೋಜಪುರಿ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುವ ಮಾತು ಕತೆ ನಡೆದಿದೆ. ಈಗಾಗಲೇ ತೆಲುಗು ಚಿತ್ರದ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ಭೋಜಪುರಿ ಮತ್ತು ಮಲಯಾಳಂ ಭಾಷೆಗಳ ಹಕ್ಕುಗಳ ಬಗ್ಗೆ ಮಾತು ಕತೆ ನಡೆದಿದೆ.
ಅಂದ ಹಾಗೆ ಮೂರನೇ ವಾರಕ್ಕೆ ಕಾಲಿಟ್ಟರೂ ಕೋಟಿಗೊಬ್ಬ 2 ಹವಾ ನಮ್ಮ ರಾಜ್ಯದಲ್ಲಿ ಕಮ್ಮಿಯಾಗಿಲ್ಲ. ಇಲ್ಲಿವರೆಗೆ ಒಟ್ಟು 25 ಕೋಟಿಯನ್ನು ಗಳಿಸಿದ ಹೊಸ ದಾಖಲೆ ಬರೆದಿದೆ. ಮೂರನೇ ವಾರದಲ್ಲೂ ಒಟ್ಟು ನೂರಾ ಆರು ಸೆಂಟರ್ಗಳಲ್ಲಿ ಪ್ರತಿ ವಾರ ಪ್ರದರ್ಶನಗೊಳ್ಳುತ್ತಿದೆ. ಫನ್ ಸಿನಿಮಾ, ಇನ್ನೊವೇಟಿವ್ ಮಲ್ಟಿಫ್ಲೆಕ್ಸ್ಗಳಲ್ಲಿ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಪರಭಾಷಾ ಚಿತ್ರದ ನಡುವೆಯೂ ಕೋಟಿ ಹವಾ: ಎಲ್ಲಕ್ಕಿಂತ ಖುಷಿಕೊಡುವ ಮತ್ತೊಂದು ವಿಚಾರ ಇಲ್ಲಿದೆ. ಅದು ಪರಭಾಷಾ ಚಿತ್ರಗಳ ಹಾವಳಿ. ಹೌದು. ಕೋಟಿಗೊಬ್ಬ 2 ರಿಲೀಸ್ ಆದ ವಾರದಲ್ಲೇ ಬಾಲಿವುಡ್ನ ಎರಡು ಸ್ಟಾರ್ ಚಿತ್ರಗಳು ರಿಲೀಸ್ ಆದವು. ಹೃತಿಕ್ ರೋಶನ್ ಅಭಿನಯದ ಮೊಹೆಂಜೋದಾರೊ, ಅಕ್ಷಯ್ಕುಮಾರ್ ಅಭಿನಯದ ರುಸ್ತುಂ. ಇದರಲ್ಲಿ ಮೊಹೆಂಜೊದಾರೊ ಓಹೊ ಎನ್ನುವ ಹಣ ಮಾಡಲಿಲ್ಲ. ಆದರೆ ರುಸ್ತುಂ ನೂರು ಕೋಟಿ ಗಳಿಸಿ ಜಾಕ್ಪಾಟ್ ಹೊಡೆಯಿತು.
ಅದೇ ರೀತಿ ಕೆಲವು ಹಾಲಿವುಡ್ ಚಿತ್ರಗಳು ಇದೇ ವಾರ ರಿಲೀಸ್ ಆದವು. ಈ ಎಲ್ಲಾ ಫೈಟಿಂಗ್ ನಡುವೆಯೂ ಕೋಟಿಗೊಬ್ಬ ಅಲ್ಲಾಡದೆ ನಿಂತು ಬಿಟ್ಟಿತು. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಸುದೀಪ್ ಚಿತ್ರವೊಂದು ದಾಖಲೆ ಮೊತ್ತದ ಲಾಭ ಮಾಡಿತು. ಇದೆಲ್ಲಾ ಸೇರಿಕೊಂಡು ಸುದೀಪ್ಗೆ ಇನ್ನೊಂದು ಇಮೇಜ್ ನೀಡಿತು. ಈಗ ಕೋಟಿಗೊಬ್ಬನ ವೈಭವ ಅದ್ದೂರಿಯಾಗಿ ಮುಂದುವರೆದಿದೆ.
ಹುಟ್ಟುಹಬ್ಬಕ್ಕೆ ಗಿಫ್ಟ್: ಈ ಬಾರಿಗೆ ಸುದೀಪ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದೇ ಕೋಟಿಗೊಬ್ಬ 2 ಚಿತ್ರದ ಭರ್ಜರಿ ಗೆಲುವು. ಕೋಟಿಗೊಬ್ಬ 2 ಚಿತ್ರಕ್ಕೆ ಎಲ್ಲ ಬಿಟ್ಟು ಕನ್ನಡದ ಸುದೀಪ್ ಯಾಕೆ ಸೆಲೆಕ್ಟ ಆದರು? ಯಾರು ಇವರನ್ನು ರೆಫರ್ ಮಾಡಿದರು ? ಅದಕ್ಕೆ ಉತ್ತರ ತಲೈವಾ ರಜನಿಕಾಂತ್. ಹೌದು, ಆಗತಾನೇ ತೆಲುಗಿನ ಈಗ ಚಿತ್ರದಲ್ಲಿ ಕಿಚ್ಚ ಭರ್ತಿ ಸ್ಕೋರ್ ಮಾಡಿದ್ದರು. ಅದನ್ನು ನೋಡಿ ರಜನಿಕಾಂತ್ ಬೋಲ್ಡ್ ಆಗಿದ್ದು, ಖುದ್ದು ಅವರೇ ಫೋನ್ ಮಾಡಿ ವಿಶ್ ಮಾಡಿದ್ದೆಲ್ಲವೂ ನಿಮಗೆ ಗೊತ್ತು.
ಆಗ ಕೆ ಎಸ್ ರವಿಕುಮಾರ್ ಕೋಟಿಗೊಬ್ಬ 2 ಕತೆ ಮಾಡಿದ್ದರು. ಎರಡು ಶೇಡ್ ಇರುವ ಪಾತ್ರಕ್ಕೆ ಯಾರನ್ನು ಹಾಕಿಕೊಂಡು ಮಾಡಲಿ ಎನ್ನುವ ಗೊಂದಲದಲ್ಲಿದ್ದರು. ಆಗ ರಜನಿ “ಕನ್ನಡದಲ್ಲಿ ಸುದೀಪ್ ಎನ್ನುವ ನಟರಿದ್ದಾರೆ. ಅವರನ್ನು ಹಾಕಿಕೊ, ನಿನ್ನ ಚಿತ್ರಕ್ಕೆ ನ್ಯಾಯ ಸಿಗುತ್ತದೆ” ಎಂದು ಸಲಹೆ ನೀಡಿದರು. ಆ ಮಾತಿನಂತೆ ಕಿಚ್ಚ ಈ ಚಿತ್ರದ ನಾಯಕನಾದರು.
ಮುಂದಾಗಿದ್ದೆಲ್ಲವೂ ಇತಿಹಾಸ. ರವಿಕುಮಾರ್ ಅಂದರೆ ಸಾಕು ಕಣ್ಣ ಮುಂದೆ ಬರುವುದು ಪಡೆಯಪ್ಪ, ಮುತ್ತು ಚಿತ್ರಗಳ ಕರಾಮತ್ತು. ರಜನಿಕಾಂತ್ ಅಭಿನಯದ ಈ ಚಿತ್ರಗಳು ಸಾರ್ವಕಾಲಿಕ ದಾಖಲೆ ಬರೆದಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಳೇ ಗಮ್ಮತ್ತನ್ನು ಕಳೆದುಕೊಂಡಿದ್ದರು ರವಿಕುಮಾರ್. ಲಿಂಗಾ ಚಿತ್ರದಲ್ಲೂ ಭರ್ಜರಿ ಗೆಲುವು ಕಾಣಲಿಲ್ಲ.
ಈಗ ಕೋಟಿಗೊಬ್ಬ 2 ಹಳೆಯ ನೋವನ್ನು ಮರೆಸಿದೆ. ನಿರ್ಮಾಪಕರಿಂದ ಹಿಡಿದು ಹಂಚಿಕೆದಾರು ಖುಷಿಯಾಗಿದ್ದಾರೆ. ಇನ್ನು ಕಿಚ್ಚನ ಫ್ಯಾನ್ಸ್ ಖುಷಿಯಾಗದೆ ಇರುತ್ತಾರಾ? ಅಭಿಮಾನಿಗಳು ಕಿಚ್ಚನ ಮನೆಯತ್ತ ಹೋಗಿ ಶುಭಾಶಯ ಹೇಳಿದರೆ, ಟ್ಟಿಟ್ಟರ್ನಲ್ಲಿ #HappyBirthdayKicchaSudeep ಟ್ರೆಂಡಿಂಗ್ ಟಾಪಿಕ್ ಆಗಿದೆ. ಒಟ್ಟಿನಲ್ಲಿ ದೇಶಾದ್ಯಂತ ಕೋಟಿಗೊಬ್ಬ-2 ಹಬ್ಬದಿಂದಾಗಿ ಕಿಚ್ಚನ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ಸಿಕ್ಕಿದೆ.
The post ಕಿಚ್ಚನ ಕೋಟಿ ‘ಹಬ್ಬ’.. ಭೇಷ್ ಬರ್ತ್ಡೇ ಬಾಯ್ appeared first on Kannada Public tv.