ಬೆಂಗಳೂರು: ಸಂಶೋಧಕ ಎಂಎಂ ಕಲಬುರ್ಗಿ ಹತ್ಯೆಯಾಗಿ 1 ವರ್ಷ ಕಳೆದರೂ ಹಂತಕರ ಪತ್ತೆಯಾಗಿಲ್ಲ. ಆದರೆ ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪವಿರುವ ಸನಾತನ ಸಂಸ್ಥೆ ಹಿಂದೂ ಧರ್ಮವನ್ನು ಕಾಪಾಡಲು ತನ್ನದೇ ಆದ ಸಂವಿಧಾನವನ್ನು ರೂಪಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹೌದು. ಸನಾತನ ಸಂಸ್ಥೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪುಸ್ತಗಳನ್ನು ಹೊರ ತಂದಿವೆ. ತನ್ನ ಕಾರ್ಯಕರ್ತರಿಗೆ ಧರ್ಮವನ್ನು ಉಳಿಸಲು ಹೇಗೆ ಸಂಘಟನೆ ಮಾಡಬೇಕು ಎನ್ನುವ ವಿವರಣೆ ಇರುವ 21 ಪುಸ್ತಗಳನ್ನು ಹೊರ ತಂದಿದೆ. ಮರಾಠಿ ಭಾಷೆಯಲ್ಲಿ ಮುದ್ರಣ ಗೊಂಡಿರುವ ಒಂದೊಂದು ಪುಸ್ತಕಗಳು ಕನಿಷ್ಟ 100 ಪುಟಗಳು ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ.
ಪುಸ್ತಕದಲ್ಲಿ ಏನಿದೆ?
ಪುಸ್ತಕದಲ್ಲಿ ಸಂಘದ ಕಾರ್ಯಕರ್ತರು ಹಿಂದೂ ಧರ್ಮವನ್ನು ಹೇಗೆ ರಕ್ಷಣೆ ಮಾಡಬೇಕು? ಹೇಗೆ ಕೆಲಸ ಮಾಡಬೇಕು? ಹಿಂದೂ ಧರ್ಮವನ್ನು ವಿರೋಧಿಸುವ ವ್ಯಕ್ತಿಗಳಿಗೆ ಹೇಗೆ ಶಿಕ್ಷೆ ನೀಡಬೇಕು ಎನ್ನುವುದನ್ನು ವಿವರಿಸಲಾಗಿದೆ.
ಕೊಲೆ ಮಾಡಿ: ವಿಚಾರವಾದಿಗಳನ್ನು ಕಾರ್ಯಕರ್ತರು ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಚಿಂತನಾ ಶೈಲಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅವರು ಬದಲಾಗದೇ ಇದ್ದಲ್ಲಿ ಧರ್ಮವನ್ನು ನಿಂದಿಸುವ ವ್ಯಕ್ತಿಗಳನ್ನು ಕೊಲೆ ಮಾಡಬಹುದು ಎಂದು ವಿವರಿಸಲಾಗಿದೆ.
ಕಲಬುರ್ಗಿ ಹತ್ಯೆಯ ತನಿಖೆಯನ್ನು ಸಿಐಡಿ, ಸಿಬಿಐ ನಡೆಸುತ್ತಿದ್ದರೂ ಹಂತಕರ ಸುಳಿವು ಸಿಕ್ಕಿಲ್ಲ. ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರನ್ನು ಹತ್ಯೆ ಮಾಡಿರುವ ವ್ಯಕ್ತಿಗಳೇ ಕಲಬುರ್ಗಿ ಅವರನ್ನು ಹತ್ಯೆ ಮಾಡಿರಬಹುದು ಎಂದು ಸಿಬಿಐ ಊಹಿಸಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಈ ಸಂಬಂಧವಾಗಿ ಇಂಗ್ಲೆಂಡ್ನ ಸ್ಕಾಟ್ಯಾರ್ಡ್ ಪೊಲೀಸರ ನೆರವನ್ನು ಸಿಬಿಐ ಪಡೆಯುತ್ತಿದೆ.
ಸನಾತನ ಸಂಸ್ಥೆಯ ಸಾರಂಗ್ ಅಕ್ಲೋಕರ್ ಮತ್ತು ವಿನಯ್ ಪವಾರ್ ವಿಚಾರವಾದಿ ದಾಬೋಲ್ಕರ್ ಹತ್ಯೆ ಮಾಡಿದ ನಂತರ ನಾಪತ್ತೆಯಾಗಿದ್ದಾರೆ. ಇವರೇ 2015ರ ಆಗಸ್ಟ್ 30ರಂದು ಕಲಬುರ್ಗಿ ಅವರನ್ನು ಹತ್ಯೆ ಮಾಡಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ತನಿಖೆ ಮುಂದುವರೆಯುತ್ತಿದೆ.
The post ಕಲಬುರ್ಗಿ ಹತ್ಯೆ; ಸನಾತನ ಸಂಸ್ಥೆಯ ಸಂವಿಧಾನ ಪುಸ್ತಕದಲ್ಲಿ ಏನು ಹೇಳಲಾಗಿದೆ? appeared first on Kannada Public tv.