ಬೆಂಗಳೂರು: ಬಿಜೆಪಿ, ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂದು ಹೇಳಿದ ಮಾಜಿ ಸಂಸದೆ ರಮ್ಯಾಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಯವಾಗಿಯೇ ತಿವಿದಿದ್ದಾರೆ.
ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ನಡೆಯಲಿರುವ ಮಂಡ್ಯದ ಸರ್.ಎಂ.ವಿ. ಕ್ರೀಡಾಂಗಣಕ್ಕೆ ಸಿದ್ಧತಾ ಪರಿಶೀಲನೆಗೆ ಆಗಮಿಸಿದ ವೇಳೆ ಮಾತನಾಡಿದ ಎಚ್ಡಿಕೆ, ಅಂತಹ ವಿಷಯ ಮಾತನಾಡಲು ನಾನು ಹುಟ್ಟಿರಲಿಲ್ಲ. ರಮ್ಯಾ ಅವರಿಗೆ ಬಹುಶಃ ಹಿಂದಿನ ಜನ್ಮದ ನೆನಪಿರಬಹುದೇನೋ ಅಂತಾ ವ್ಯಂಗ್ಯವಾಡಿದರು.
ರಮ್ಯಾ ಅವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಈಗ ನಮಗೆ ಆ ವಿಷ್ಯ ಅಪ್ರಸ್ತುತ. ಇಂದಿನ ದೇಶದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ರೆ ಅವರು ಜನರ ವಿಶ್ವಾಸ ಗಳಿಸ್ತಾರೆ. ಮೈಮೇಲೆ ಎಳೆದುಕೊಳ್ಳುವ ಕೆಲಸ ಪದೇ ಪದೇ ಯಾಕೆ ಮಾಡ್ತಿದ್ದಾರೆ. ಅವರು ಕಾಂಟ್ರವರ್ಸಿ ಮಾಡಿಕೊಂಡ್ರೆ ಲೀಡರ್ ಆಗ್ತೀನಿ ಅನ್ಕೊಂಡ್ರೆ ಆ ಬಗ್ಗೆ ನಮಗೆ ಗೊತ್ತಿಲ್ಲ. ಅದರೆ ಇದ್ರಿಂದ ಉಪಯೋಗ ಬರೋದಿಲ್ಲ ಎಂದು ಹೇಳಿದರು.
ಊಟಕ್ಕೆ ಗತಿಯಿಲ್ಲದವರ ಬಗ್ಗೆ ಯೋಚಿಸಿ: ಸ್ವಾತಂತ್ರ್ಯ ಯಾರು ತಂದುಕೊಟ್ರು ಎಂಬುದು ಮುಗಿದು ಹೋಗಿರುವ ಕತೆ, ಅದು ಅಪ್ರಸ್ತುತ. ಸ್ವಾತಂತ್ರ್ಯ ಬಂದ ಮೇಲೆ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಜನರಿದ್ದಾರೆ. ಅವರ ಬಗ್ಗೆ, ರೈತರ ಬಗ್ಗೆ ಯೋಚಿಸಬೇಕು. ಅದರ ಕಡೆ ಗಮನ ಕೊಟ್ಟು ರಮ್ಯಾ ಅವರು ಹೋರಾಟ ಮಾಡಿದ್ರೆ ಒಳ್ಳೆಯದು ಅಂತಾ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ನವರು ನಾವು ಸ್ವತಂತ್ರ್ಯ ತಂದು ಕೊಟ್ಟು ಅಂತಾರೆ. ಆರ್.ಎಸ್.ಎಸ್.ನವರು ಒಂದು ರೀತಿ ಹೇಳ್ತಾರೆ. ಹಲವರು ಹಲವಾರು ರೀತಿ ಹೇಳ್ತಾರೆ. ಆ ಸಂದರ್ಭದಲ್ಲಿ ಏನಾಗಿದೆ ಎಂದು ಇತಿಹಾಸದ ಪುಸ್ತಕಗಳಿಂದ ಓದಬಹುದು. ವೀರ ಸಾವರ್ಕರ್ ಮೇಲೆ ನೆಗೆಟಿವ್ ಆಗಿಯೂ ಹೇಳ್ತಾರೆ, ಪಾಸಿಟಿವ್ ಆಗಿಯೂ ಹೇಳ್ತಾರೆ. ಸುಭಾಷ್ ಚಂದ್ರಬೋಸ್ ಬಗ್ಗೆಯೂ ಇದೇ ರೀತಿ ಹೇಳ್ತಾರೆ. ಬಹುಶಃ ರಮ್ಯಾ ಅವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.
The post ಕಾಂಟ್ರವರ್ಸಿ ಮಾಡಿಕೊಂಡ್ರೆ ಲೀಡರ್ ಆಗಲ್ಲ ರಮ್ಯಾ: ಎಚ್ಡಿಕೆ appeared first on Kannada Public tv.