ಕೊಪ್ಪಳ: ಭತ್ತದ ನಾಡು ಎಂದಾಕ್ಷಣ ಇಲ್ಲಿನ ಜಮೀನಿಗೆ ಬಾರಿ ಬೇಡಿಕೆ ಇದೆ. ಗೇಣು ಭೂಮಿ ಸಿಕ್ಕರೆ ಸಾಕು ಭತ್ತ ಬೆಳೆಯುತ್ತಾರೆ. ಎಕರೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ. ಅಷ್ಟೊಂದು ಮಹತ್ವ ಹೊಂದಿರುವ ಇಲ್ಲಿನ ಕೃಷಿ ಭೂಮಿಯಲ್ಲಿ ಇಲ್ಲೊಬ್ಬ ರೈತ ಎರಡು ಎಕರೆ ತುಳಸಿ ಬೆಳೆದು ಜನಸಾಮಾನ್ಯಾರಿಗೆ, ದೇವಸ್ಥಾನ, ಪೂಜೆ ಪುನಸ್ಕಾರಗಳಿಗೆ ತುಳಸಿಯನ್ನು ಉಚಿತವಾಗಿ ದಾನ ಮಾಡುತ್ತಾ ಬಂದಿದ್ದಾರೆ.
ಯಂಕಪ್ಪ ಕಟ್ಟಿಮನಿ ಮೂಲತ ಕೊಪ್ಪಳದ ಗಂಗಾವತಿ ನಿವಾಸಿ. ಗಂಗಾವತಿ ತಾಲೂಕಿನ ಹೀರೆಬೇಣಕಲ್ ಗ್ರಾಮದ ಬಳಿ 8 ಎಕರೆ ಜಮೀನಿನಲ್ಲಿ 2 ಎಕರೆ ತುಳಸಿ ಬೆಳೆಸುತ್ತಿದ್ದಾರೆ. ಈ ಮೊದಲು ಹೈದ್ರಾಬಾದ್ ಕರ್ನಾಟಕದಲ್ಲಿ ತುಳಸಿ ಎಲ್ಲಿಯೂ ಬೆಳೆಯುವುದಿಲ್ಲ. ಅತ್ಯಂತ ಅವಶ್ಯಕವಿರುವ ಈ ತುಳಿಸಿಯನ್ನು ಸ್ಥಳೀಯರು ಆಂಧ್ರ ಪ್ರದೇಶಕ್ಕೆ ತುಳಸಿ ತರಲು ಹೋಗುತ್ತಿದ್ದರು. ಅದನ್ನೆಲ್ಲ ಗಮನಿಸಿದ ರೈತ ಯಂಕಪ್ಪ ಕಟ್ಟಿಮನಿ ತನ್ನ ಜಮೀನಿನಲ್ಲಿಯೇ ಕಳೆದ 10 ವರ್ಷದ ಹಿಂದೆ ಆಂಧ್ರದ ಈರಾಳ ನಗರದಿಂದ ತುಳಸಿ ಸಸಿಗಳನ್ನು ತಂದು ಬೆಳೆಸುತ್ತಿದ್ದಾರೆ.
ವರ್ಷವಿಡಿ ತುಳಸಿ ಗಿಡ ಬೆಳೆಸಿಕೊಂಡು, ತುಳಸಿ ನಾಟಿ ಮಾಡಿಕೊಂಡು ಬೆಳೆಸುತ್ತಾ ಉಚಿತವಾಗಿ ದಾನ ಮಾಡುತ್ತಾರೆ. ತೋಟಕ್ಕೆ ಬಂದು ಕೇಳಿದವರಿಗೆ ಪಾಕೆಟ್ನಲ್ಲಿ ಬೆಳೆಸಿದ ಸಸಿಗಳನ್ನು ದಾನ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಇರುವ ಕಡೆಗಳಲ್ಲಿ ತುಳಸಿ ಸಸಿಗಳನ್ನು ಭಕ್ತರಿಗೆ ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಿದ ಹಾಗೆ ತುಳಸಿ ಸಸಿಗಳನ್ನು ಬೆಳೆಸುತ್ತಾರೆ. ವರ್ಷಕ್ಕೆ ತುಳಸಿ ದಾನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ.
ಶ್ರಾವಣ ಮಾಸ, ಕಾರ್ತಿಕ ಮಾಸ, ಶಿವರಾತ್ರಿ ಬಂದರೆ ಸಾಕು ನಾನಾ ಕಡೆಗಳಿಂದ ದೇವಸ್ಥಾನಗಳಿಗೆ ತುಳಸಿ ದಳಗಳನ್ನು ತೆಗೆದುಕೊಂಡು ಹೊಗಲು ಭಕ್ತರು ರೈತ ಯಂಕಪ್ಪ ಕಟ್ಟಿಮನಿಯ ತೋಟಕ್ಕೆ ಸಾಲುಗಟ್ಟಿ ಬರುತ್ತಾರೆ. ಬಹುತೇಕ ಜನರು ಪೂಜೆಗೆಂದು ತುಳಸಿ ದಳಗಳನ್ನು ತೆಗೆದುಕೊಂಡು ಹೋಗುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಬಂದ ಭಕ್ತರಿಗೆ ಅಲ್ಪೋಪಹಾರ ಮಾಡಿ ಕಳಿಸುತ್ತಾರೆ. ದಾವಣಗೆರೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ ಸೇರಿದಂತೆ ಸುತ್ತಲ ಜಿಲ್ಲೆಗೆಳ ಜನರು ತುಳಸಿ ದಳಗಳನ್ನೂ ತೆಗೆದುಕೊಂಡು ಹೋಗಲು ಬರುತ್ತಾರೆ.
ಇವರ ತುಳಸಿ ಪೂಜೆ ಪುನಸ್ಕಾರಕ್ಕೆ ಅಷ್ಟೇ ಹೋಗವುದಿಲ್ಲ. ಆಯುರ್ವೇಧಿಕ ಔಷಧಿಯಾಗಿರುವ ತುಳಸಿ ಗಿಡವನ್ನು ರೋಗಿಗಳು ತೆಗೆದುಕೊಂಡು ಹೋಗುತ್ತಾರೆ. ಕೆಮ್ಮು, ಎದೆ ನೋವು, ಮೊಣಕಲಾಲು ನೋವು ಸೇರಿದಂತೆ ಇತರೆ ಕಾಯಿಲೆಗಳಗೆ ತುಳಸಿ ಖಷಾಯ ಅವಶ್ಯಕವಾಗಿರುವ ಕಾರಣ ಇಲ್ಲಿಂದಲೇ ತುಳಸಿ ತೆಗೆದುಕೊಂಡು ಹೋಗುತ್ತಾರೆ. ಉಳಿದ ಆರು ಎಕರೆ ಜಮೀನಿನಲ್ಲಿ ಇವರು ದಾಳಂಬೆ, ಮಾವು, ಲಿಂಬೆ ಬೆಳೆದಿದ್ದಾರೆ. ಅದರ ಜೊತೆಗೆ ತೋಟ, ತುಳಸಿ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
The post 2 ಎಕರೆಯಲ್ಲಿ ತುಳಸಿ ಬೆಳೆದು ದಾನ ಮಾಡ್ತಾರೆ ಕೊಪ್ಪಳದ ರೈತ! appeared first on Kannada Public tv.