ಬಳ್ಳಾರಿ: ಜಿಲ್ಲೆಯಲ್ಲಿರುವ 134 ಎಕರೆ ಭೂ ವ್ಯಾಜ್ಯವೊಂದು ಇನ್ನೂ ನ್ಯಾಯಾಲಯದಲ್ಲಿದೆ. ಆದ್ರೆ ನ್ಯಾಯಾಲಯದ ವಿಚಾರಣೆಯಲ್ಲಿರುವ ನೂರಾರು ಎಕರೆ ಭೂಮಿಯನ್ನು ಲೇಔಟ್ ಮಾಡಲು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ ಸಜ್ಜಾಗಿ ನಿಂತು ಬಿಟ್ಟಿದೆ. ಸ್ವಂತ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಕಟ್ಟಾ ಶಿಷ್ಯನೇ ಕಾನೂನು ಉಲ್ಲಂಘಿಸಿ ಲೇಔಟ್ ನಿರ್ಮಾಣಕ್ಕೆ ಅಸ್ತು ಅಂದಿದ್ದಾರೆ. ಇದಕ್ಕೆ ಬಳ್ಳಾರಿಯ ವಿಧಾನಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಸಹ ಸಾಥ ಕೊಟ್ಟಿರುವುದು ಬುಡಾ ಅಕ್ರಮಕ್ಕೆ ಕೊನೆಯೇ ಇಲ್ಲದಂತಾಗಿದೆ.
134 ಎಕರೆ ಬೆಳೆಬಾಳುವ ಭೂಮಿ ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದಲ್ಲಿದೆ. ಕಳೆದ 80 ವರ್ಷಗಳಿಂದ ಈ ಭೂಮಿಯನ್ನು ಉಳುಮೆ ಮಾಡುತ್ತಿರುವ 44 ರೈತರ ಬಳಿ ಪಟ್ಟಾ ಸಹ ಇದೆ. ಆದ್ರೆ ಇದೇ ಭೂಮಿಯನ್ನು ಕಾಂಗ್ರೆಸ್ ಮುಖಂಡ ಎನ್ ಪ್ರತಾಪರೆಡ್ಡಿ 2005ರಲ್ಲಿ ಖರೀದಿ ಮಾಡಿ ಭೂಮಿ ತಮ್ಮದೂ ಅಂತಿದ್ದಾರೆ. ಈ ಕುರಿತಂತೆ ಕಾಂಗ್ರೆಸ್ ಮುಖಂಡ ಪ್ರತಾಪರೆಡ್ಡಿ ಹಾಗೂ ರೈತರ ಮಧ್ಯದ ವಾಜ್ಯ ಮೂರು ನ್ಯಾಯಾಲಯಗಳಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ. ಆದ್ರೆ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿಯಿರುವಾಗಲೇ ಈ ಭೂಮಿಯನ್ನು ಬಳ್ಳಾರಿಯ ನಗರಾಭಿವೃದ್ದಿ ಪ್ರಾಧಿಕಾರ ಕಾನೂನು ಉಲ್ಲಂಘಿಸಿ ಲೇಔಟ್ ಮಾಡಲು ಸಜ್ಜಾಗಿ ನಿಂತು ಬಿಟ್ಟಿದೆ.
ಈ 134 ಎಕರೆ ಭೂ ವ್ಯಾಜ್ಯ ಧಾರವಾಡ ಸಂಚಾರಿ ಪೀಠ, ಬಳ್ಳಾರಿಯ ಸಿವಿಲ್ ನ್ಯಾಯಾಲಯ ಮತ್ತು ಬೆಂಗಳೂರಿನ ಕೆಎಟಿಯಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಈ ಭೂಮಿಯನ್ನು ಲೇಔಟ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬಾರದೆಂದು ಸ್ವಂತ ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿಗಳು ಮತ್ತು ಬುಡಾದ ಕಾನೂನು ಸಲಹೆಗಾರರು, ಜೊತೆಗೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಸಹ ಆದೇಶ ಮಾಡಿದ್ದಾರೆ.
ಆದ್ರೆ ಬಳ್ಳಾರಿಯ ಹಾಲಿ ಎಂಎಲ್ಸಿ ಕೆಸಿ ಕೊಂಡಯ್ಯರ ಒತ್ತಡಕ್ಕೆ ಮಣಿದು, ಬುಡಾದ ಹಾಲಿ ಅಧ್ಯಕ್ಷ ಹುಮಾಯಾನ್ಖಾನ ಯಾವ ಆದೇಶಕ್ಕೂ ಕ್ಯಾರೆ ಎನ್ನದೆ ಕಾನೂನು ಉಲ್ಲಂಘಿಸಿ ಲೇಔಟ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಭೂಮಿ ತಮ್ಮದೂ ಅನ್ನೋ ರೈತರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯ ಭೂ ವಿವಾದ ನ್ಯಾಯಾಲಯದಲ್ಲಿ ಬಾಕಿಯಿರುವುವಾಗಲೇ ಈ ಭೂಮಿಯನ್ನು ಲೇಔಟ್ ಮಾಡಲು ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಹಾಲಿ ಬುಡಾ ಅಧ್ಯಕ್ಷರು ಈ ಭೂಮಿಯನ್ನು ಲೇಔಟ್ ಮಾಡುವ ಆದೇಶ ನೀಡೋದಕ್ಕೆ ಕೋಟಿ ಕೋಟಿ ಹಣ ಪಡೆದಿದ್ದಾರೆ ಅನ್ನೋ ಗುಮಾನಿ ಸಹ ಇದೀಗ ಬುಡಾದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಬುಡಾದಲ್ಲಿನ ಅಕ್ರಮ ಪ್ರಶ್ನಿಸುವವರ್ಯಾರು ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ.
The post ವಿವಾದಿತ ಭೂಮಿಯಲ್ಲಿ ಲೇಔಟ್: ಬಳ್ಳಾರಿ ಬುಡಾದಲ್ಲಿ ರೋಷನ್ ಬೇಗ್ ಶಿಷ್ಯನ ದರ್ಬಾರ್! appeared first on Kannada Public tv.