ಬೆಂಗಳೂರು: ದೇವರ ದುಡ್ಡಿಗೆ ಕಣ್ಣುಹಾಕಿದ ಪುಡಿ ರೌಡಿಗಳ ಗುಂಪು ದೇವರ ಕಾಸಿಗಾಗಿ ದೇಗುಲದವರಿಗೆ ಚಾಕು ಹಿಡಿದು ಬೆದರಿಸಿದ್ದಾರೆ. ದೇವಿಯ ಆರಾಧಕರಿಗೆ ಈಗ ಪ್ರಾಣಭಯ ಶರುವಾಗಿದ್ದು, ದೇವರನ್ನು ಕಾಪಾಡಿ ಅಂತಾ ದೇಗುಲ ಟ್ರಸ್ಟಿ ಅಧ್ಯಕ್ಷ ಮುಜರಾಯಿಗೆ ಮೊರೆ ಹೋಗಿದ್ದಾರೆ.
ಪುಡಿ ರೌಡಿ ನಾಗೇಶ ಎಂಬಾತ ಜಬರ್ದಸ್ತಾಗಿ ದೇವರ ಕಾಸು ಎಣಿಸುತ್ತಾನೆ. ತನ್ನ ಖರ್ಚಿಗೆ ಕಾಸು ಕಡಿಮೆಯಾದಗಲೆಲ್ಲಾ ದೇವನಹಳ್ಳಿಯ ತಮ್ಮ ದೊಡ್ಡಪ್ಪ ಅಂಜನಪ್ಪ ಟ್ರಸ್ಟಿಯಾಗಿರುವ ಗಂಗಾಪರಮೇಶ್ವರಿ ದೇವಾಸ್ಥಾನಕ್ಕೆ ಚಾಕುಚೂರಿ ರಾಡು ಹಿಡಿದುಕೊಂಡು ಬರ್ತಾನಂತೆ. ಟ್ರಸ್ಟಿಯ ಕುತ್ತಿಗೆಗೆ ಚಾಕು ಹಿಡಿದು ಹುಂಡಿ ಒಡೆಸಿ ಅವನ ಗ್ಯಾಂಗ್ ದುಡ್ಡು ಎಣಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ಹೋಗ್ತಾರಂತೆ. ಇಷ್ಟು ದೃಶ್ಯವನ್ನು ಅಂಜನಪ್ಪನವರ ಪುತ್ರ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದು ಪಬ್ಲಿಕ್ ಟಿವಿಗೆ ತಲುಪಿಸಿದ್ದಾರೆ.
ಅಷ್ಟಕ್ಕೂ ಇದೆಲ್ಲ ನಡೆಯೋದು ಹಾಡುಹಗಲೇ. ಆದ್ರೆ ಈ ಪುಡಿರೌಡಿಗಳ ವಿರುದ್ಧ ಮಾತಾನಾಡೋ ಧೈರ್ಯ ಯಾರಿಗೂ ಇಲ್ವಂತೆ. ಈಗಾಗಲೇ ಇವ್ರ ಪುಂಡಾಟಿಕೆಯ ವರ್ತನೆಗೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಈ ವಿಷ್ಯ ತಿಳಿಯುತ್ತಿದ್ದಂತೆ ಅಂಜನಪ್ಪ ಕೈಗೆ ರಾಡಿನಿಂದ ಹೊಡೆದು ನಾಗೇಶ್ ಹಾಗೂ ಆತನ ತಾಯಿ ಹಲ್ಲೆ ಮಾಡಿದ್ದಾರೆ.
ಇದೀಗ ಪ್ರಾಣಭಯದಿಂದ ಒದ್ದಾಡುತ್ತಿರುವ ಅಂಜನಪ್ಪನವರ ಕುಟುಂಬ ಮುಜರಾಯಿ ಇಲಾಖೆಯಾದ್ರೂ ಮಧ್ಯಪ್ರವೇಶಿಸಿ ದೇಗುಲವನ್ನು ವಶಕ್ಕೆ ಪಡೆದುಕೊಳ್ಳಲಿ ಅಂತಾ ವಿನಂತಿಸಿಕೊಳ್ಳುತ್ತಿದ್ದಾರೆ.
ರೌಡಿಯ ಉಪಟಳದಿಂದ ದುರ್ಗಿಯ ಆರಾಧಕನ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಪುಡಿರೌಡಿಗಳ ಅಟ್ಟಹಾಸಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿಲ್ಲ, ಮುಜರಾಯಿ ಇಲಾಖೆಯಾದ್ರೂ ಕ್ರಮ ಕೈಗೊಳ್ಳುತ್ತಾ ನೋಡಬೇಕು.
The post ಬೆಂಗಳೂರು: ಖರ್ಚಿಗೆ ಹಣವಿಲ್ಲಂದ್ರೆ ದೇವರ ಹುಂಡಿಗೆ ರೌಡಿ ಕನ್ನ appeared first on Kannada Public tv.