Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ಫೋಟೋ ತೆಗೆಯುವ ವೇಳೆ ಪಿಲ್ಲರ್ ಕಲ್ಲು ಬಿದ್ದು ಬಾಲಕ ಸಾವು

$
0
0

– ರಕ್ಷಿಸಿ ಎಂದು ಕೂಗಿದ್ರೆ ಜನರು ಸೆಲ್ಫೀ ತೆಗೆಯುತ್ತಿದ್ದರಂತೆ!
– ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಎರಡನೇ ದುರಂತ
– ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದ್ದರೂ ಕೇಳಿರಲಿಲ್ಲವಂತೆ!

ಬೆಂಗಳೂರು: ಸಿಲಿಕಾನ್ ಸಿಟಿಯ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಫೋಟೋ ತೆಗೆಯುವ ವೇಳೆ ಪಿಲ್ಲರ್ ಕಲ್ಲು ಬಿದ್ದು ಬಾಲಕ ದುರ್ಮರಣವನ್ನಪ್ಪಿದ್ದಾನೆ. ಶ್ರೀರಾಂಪುರದ ಕುಮಾರ್ ಹಾಗೂ ರೇವತಿ ದಂಪತಿ ಪುತ್ರ 6 ವರ್ಷದ ವಿಕ್ರಮ್ ಮೃತ ಬಾಲಕ. ಇಂದು ಮಧ್ಯಾಹ್ನ 2.45ರ ವೇಳೆ ಪೋಷಕರ ಜೊತೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಘಟನೆ ಹೇಗಾಯ್ತು?: ಈಗ ಶಾಲೆಗಳಿಗೆ ಕ್ರಿಸ್ಮಸ್ ರಜೆ. ಹೀಗಾಗಿ ಇಂದು ಮಧ್ಯಾಹ್ನ ಊಟ ಮುಗಿಸಿ ವಿಕ್ರಮ್ ಹಾಗೂ ಸಂಬಂಧಿಕರು ಲಾಲ್‍ಬಾಗ್‍ಗೆ ಬಂದಿದ್ದರು. ಇವರೆಲ್ಲರೂ ಪಶ್ಚಿಮ ದ್ವಾರದಿಂದ ಲಾಲ್‍ಬಾಗ್ ಪ್ರವೇಶಿಸಿದ್ದಾರೆ. ಸುತ್ತಾಡುತ್ತಿರುವಾಗ ಒಂದು ಕಡೆ ಕಲ್ಲಿನ ಕಲಾಕೃತಿಯ ಬಳಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಮಗುವನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸುವ ವೇಳೆ ಕಲ್ಲಿನ ಕಂಬ ಮತ್ತು ಅದರ ಮೇಲೆ ಇರಿಸಲಾಗಿದ್ದ ದುಂಡಗಿನ ಕಲ್ಲು ವಿಕ್ರಮ್ ಮೇಲೆ ಬಿದ್ದಿದೆ. ಆ ಕಲ್ಲು ನೇರವಾಗಿ ವಿಕ್ರಮ್ ತಲೆ ಮೇಲೆಯೇ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿಕ್ರಂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾನೆ. ಮಗುವಿನ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಘಟನೆ ಬಗ್ಗೆ ಮಾಹಿತಿ ನೀಡಿದ ವಿಕ್ರಮ್ ಜೊತೆ ಬಂದಿದ್ದ ಸಂಬಂಧಿಯೊಬ್ಬರು, ಊಟ ಮಾಡಿ ನಾವು ಐವರು ಪಾರ್ಕ್‍ಗೆ ಹೋಗಿದ್ದೆವು. ನಾವೆಲ್ಲಾ ಲಾಲ್‍ಬಾಗ್ ಸುತ್ತಿ ಬಂದೆವು. ಪಿಲ್ಲರ್ ಬಳಿ ವಿಕ್ರಮ್‍ನನ್ನು ನಿಲ್ಲಿಸಿ ಫೋಟೋ ತೆಗೆಯುತ್ತಿದ್ದೆವು. ಆದರೆ ಪಿಲ್ಲರ್ ಮುಟ್ಟಿದ ತಕ್ಷಣವೇ ಕಲ್ಲು ವಿಕ್ರಮ್ ತಲೆ ಮೇಲೆಯೇ ಬಿತ್ತು. ಆದರೆ ಆ ವೇಳೆ ಸ್ಥಳದಲ್ಲಿದ್ದ ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಕೆಲವರು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಸಹಾಯ ಮಾಡಿ ಸಹಾಯ ಮಾಡಿ ಎಂದು ನಾವು ಕೂಗಾಡಿದೆವು. ಆದರೆ ಯಾರೂ ಮುಂದೆ ಬರಲಿಲ್ಲ. ತಕ್ಷಣವೇ ರಕ್ಷಣೆ ಮಾಡಿದ್ದರೆ ಬಾಲಕ ಬದುಕುತ್ತಿದ್ದ ಎಂದು ಕಣ್ಣೀರಿಟ್ಟರು. ಕೊನೆಗೆ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬರು ಸಹಾಯಕ್ಕೆ ಮುಂದೆ ಬಂದರು. ಅವರ ಬೈಕ್‍ನಲ್ಲೇ ವೆಸ್ಟ್ ಗೇಟ್‍ನಲ್ಲಿರುವ ಸೌತ್ ಸಿಟಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಇದೇ ವೇಳೆ ಮಾತನಾಡಿದ ವಿಕ್ರಮ್ ತಾಯಿ, ನಾನು ವಿಕ್ರಮ್ ಜೊತೆ ಹೋಗಿರಲಿಲ್ಲ. ಮಧ್ಯಾಹ್ನ 2.30ರ ಸುಮಾರಿಗೆ ಫೋನ್ ಬಂತು. ಆಗ ನಮಗೆ ವಿಷಯ ಗೊತ್ತಾಯಿತು ಎಂದರು.

ಮಗುವಿನ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದೇವೆ. ಇದಕ್ಕೆ ಯಾರಾದರೂ ನಮಗೆ ಸಹಾಯ ಮಾಡಬೇಕು. ಈ ಮೂಲಕವಾದರೂ ನನ್ನ ಮಗ ಜೀವಂತವಾಗಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ ಎಂದು ವಿಕ್ರಮ್ ದೊಡ್ಡಪ್ಪ ಹೇಳಿದ್ದಾರೆ. ನಮ್ಮ ಮಗ ಭಾರತೀಯ ವಿದ್ಯಾಭವನದಲ್ಲಿ 1 ನೇ ತರಗತಿಯಲ್ಲಿ ಓದುತ್ತಿದ್ದ. 7 ವರ್ಷ ಹಿಂದೆ ನನ್ನ ತಮ್ಮನಿಗೆ ಮದುವೆಯಾಗಿತ್ತು. ಅವರಿಗೆ ವಿಕ್ರಮ್ ಒಬ್ಬನೇ ಮಗ ಎಂದು ವಿಕ್ರಮ್ ದೊಡ್ಡಪ್ಪ ಹೇಳಿದ್ದಾರೆ.

ತೋಟಗಾರಿಕಾ ಇಲಾಖೆ ಹೇಳೋದೇನು?: ಮಗುವನ್ನು ಪಿಲ್ಲರ್ ಮೇಲೆ ಕೂರಿಸುವಾಗ ಘಟನೆ ನಡೆದಿದೆ. ನಾವು ಆಗಲೇ ಎಚ್ಚರಿಕೆ ನೀಡಿದ್ದೆವು. ಆದರೆ ನಮ್ಮ ಸಿಬ್ಬಂದಿ ಎಚ್ಚರಿಕೆ ತಿರಸ್ಕರಿಸಿ ಕೂರಿಸಿದ್ದರು. ಘಟನೆ ನಡೆದ ತಕ್ಷಣ ನಮ್ಮ ಸಿಬ್ಬಂದಿ ಸಹಾಯಕ್ಕೆ ಧಾವಿಸಿದ್ದರು. ನಾನೇ ಖುದ್ದಾಗಿ ನಿಂತು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಂಆರ್ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಆದರೆ ತೋಟಗಾರಿಕೆ ಇಲಾಖೆ ವಿರುದ್ಧ ದೂರು ದಾಖಲಿಸಲು ಮಗುವಿನ ಸಂಬಂಧಿಕರು ನಿರ್ಧರಿಸಿದ್ದಾರೆ.

ಸಸ್ಯಕಾಶಿಯಲ್ಲಿ ರಕ್ಷಣೆಯೇ ಇಲ್ಲ!: ಇಂದಿನ ಘಟನೆ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ 2ನೇ ದುರಂತ. ಈ ಹಿಂದೆ ಕಳೆದ ವರ್ಷ ಆಗಸ್ಟ್ 15ರಂದು ಫ್ಲವರ್ ಶೋ ವೇಳೆ ಜೇನ್ನೊಣ ಕಚ್ಚಿ 2ನೇ ತರಗತಿ ಓದುತ್ತಿದ್ದ ಪದ್ಮನಾಭನಗರದ ನಿವಾಸಿ ವೈಷ್ಣವಿ ಎಂಬ ಬಾಲಕಿ ಸಾವನ್ನಪ್ಪಿದ್ದಳು. 2ನೇ ತರಗತಿ ಓದುತ್ತಿದ್ದ ಬಾಲಕಿ ಮರದ ಕೆಳಗೆ ಆಟವಾಡುತ್ತಿದ್ದಾಗ ಜೇನ್ನೊಣಗಳು ದಾಳಿ ನಡೆಸಿವೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವೈಷ್ಣವಿ ಸಾವನ್ನಪ್ಪಿದ್ದಳು.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>