ಲಕ್ನೋ: ನೋಟ್ ಬ್ಯಾನ್ ನಂತರ ಹಣವಿನಿಮಯಕ್ಕಾಗಿ ಹಾಗೂ ಹಣ ಡ್ರಾ ಮಾಡಲು ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂನಲ್ಲಿ ನಿಂತು ಸಾವನ್ನಪ್ಪಿದ 13 ಕುಟುಂಬಗಳಿಗೆ ಉತ್ತರಪ್ರದೇಶ ಸರ್ಕಾರ ಪರಿಹಾರ ನೀಡಿದೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರದಂದು 13 ಮಂದಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಇದರ ಜೊತೆಗೆ ಕ್ಯೂನಲ್ಲಿ ನಿಂತ ವೇಳೆ ಬ್ಯಾಂಕ್ನಲ್ಲೇ ಮಗುವಿಗೆ ಜನ್ಮ ನೀಡಿದ ವಿಧವೆಯೊಬ್ಬರಿಗೂ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ.
25 ವರ್ಷದ ಸರ್ವೇಶ ದೇವಿ ಎಂಬವರು 5 ತಿಂಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡಿದ್ದರು. ಗರ್ಭಿಣಿಯಾಗಿದ್ದ ಇವರು ಲೋಹಿಯಾ ಆವಾಜ್ ಯೋಜನೆಯಡಿ ಮನೆಯೊಂದನ್ನು ನಿರ್ಮಿಸುತ್ತಿದ್ದ ಕಾರಣ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ 20 ಸಾವಿರ ರೂ. ಹಣಕ್ಕಾಗಿ ಬ್ಯಾಂಕ್ಗೆ ತೆರಳಿದ್ದರು. ಗರ್ಭಿಣಿಯಾಗಿದ್ದ ಕಾರಣ ಕ್ಯೂನಲ್ಲಿ ನಿಲ್ಲಲು ಕಷ್ಟವಾಗುತ್ತದೆ. ಹೀಗಾಗಿ ತನಗೆ ಬೇಗ ಹಣ ಕೊಡುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದ್ದರು. ಆದ್ರೆ ಸಿಬ್ಬಂದಿ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸಿದ್ದರು. ಬೆಳಗ್ಗೆ 9 ಗಂಟೆಯಿಂದ ಕ್ಯೂನಲ್ಲಿ ನಿಂತಿದ್ದ ಸರ್ವೇಶ ದೇವಿ ಅವರಿಗೆ ಸಂಜೆ 4 ಗಂಟೆಗೆ ಬ್ಯಾಂಕ್ನಲ್ಲೇ ಹೆರಿಗೆಯಾಗಿತ್ತು. ಬ್ಯಾಂಕ್ನಲ್ಲಿ ಜನಿಸಿದ್ದರಿಂದ ತನ್ನ ಮಗುವಿಗೆ ಸರ್ವೇಶಾ ದೇವಿ ಖಜಾಂಚಿ ಎಂದು ನಾಮಕರಣ ಮಾಡಿದ್ದಾರೆ.