ಬೆಂಗಳೂರು/ಚಿಕ್ಕಮಗಳೂರು: ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರೇಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಟೇಲ್ ಹನುಮಂತರಾಯಪ್ಪ ಎಂಬವರ ಮನೆಯ ಬಚ್ಚಲ ಕೋಣೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ರಾತ್ರಿ ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಮನೆಯಲ್ಲಿ ಕೂಡಿಹಾಕಲಾಗಿದೆ.
ಕಳೆದೊಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆ ಇದಾಗಿದೆ. ಚಿರತೆಯನ್ನು ಮನೆಯಲ್ಲಿ ಕೂಡಿಹಾಕಿರೋ ವಿಚಾರ ತಿಳಿದ ಅಕ್ಕಪಕ್ಕದ ಗ್ರಾಮಸ್ಥರ ದಂಡು ಹನುಮಂತರಾಯಪ್ಪ ಮನೆ ಮುಂದೆ ಜಮಾಯಿಸಿದೆ. ದೊಡ್ಡಬಳ್ಳಾಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಚಿರತೆಯ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅತ್ತ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಂಚತವರು ಗ್ರಾಮದಲ್ಲಿ ಬಾಳೆ ತೋಟದ ಬೇಲಿಗೆ ಹಾಕಿದ್ದ ಉರುಳಿಗೆ ಸಿಕ್ಕಿ ಮೂರು ವರ್ಷದ ಗಂಡು ಚಿರತೆ ಸಾವನಪ್ಪಿರೋ ಘಟನೆ ನಡೆದಿದೆ. ನಾಗೇಂದ್ರ ನಾಯ್ಕ್(54) ಈ ಬಾಳೆ ತೋಟವನ್ನು ಭೋಗ್ಯಕ್ಕೆ ಪಡೆದಿದ್ದರು. ಚಿರತೆ ಸಾವಿನ ವಿಷಯ ತಿಳಿದು ಆರೋಪಿ ನಾಗೇಂದ್ರ ನಾಯ್ಕ್ ನಾಪತ್ತೆಯಾಗಿದ್ದಾರೆ. ಆರೋಪಿಗಾಗಿ ತರೀಕೆರೆ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್ಕೆ ಶ್ರೀನಿವಾಸ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಾಗಿದೆ.