ಬೆಂಗಳೂರು: ಈ ಆಟೋಡ್ರೈವರ್ನಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಈ ಮಕ್ಕಳು ಓದೋದ್ರಲ್ಲಿ ಎಲ್ಲರೂ ಟಾಪರ್. ಆದರೆ ಬೆನ್ನುಮೂಳೆ ಆಪರೇಷನ್ ಆಗಿ ದುಬಾರಿ ಕೆಲಸ ಮಾಡಲು ಸಾಧ್ಯವಾಗದೆ ಸಂಸಾರ ಸಾಗಿಸೋದು ಕಷ್ಟ ಆಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ನಿಲ್ಲುವ ಭಯ. ಆದರೆ ಯಾರದ್ರೂ ಶಿಕ್ಷಣಕ್ಕೆ ಸಹಾಯ ಮಾಡಿದರೆ ಡಾಕ್ಟರ್, ಐಎಎಸ್ ಅಧಿಕಾರಿಯಾಗೋ ಆಸೆಯನ್ನು ಹೊಂದಿದ್ದಾರೆ ಈ ಮಕ್ಕಳು.
ಮಂಗನಹಳ್ಳಿಯ ನಿವಾಸಿಯಾಗಿರುವ ಬಸವರಾಜ್ ಕಳೆದ 20 ವರ್ಷಗಳಿಂದ ಆಟೋ ಓಡಿಸಿಕೊಂಡು ತನ್ನ ಹೆಂಡತಿ ಮಕ್ಕಳ ಜೊತೆ ಸಂತೋಷದಿಂದ ಜೀವನ ಮಾಡುತ್ತಿದ್ದರು. ಆದರೆ ಇವರ ಹಣೆ ಬರಹ ಏನೋ ಕಾಲಿನಲ್ಲಿ ರಕ್ತ ಸಂಚಲನ ನಿಂತು ಬೆನ್ನುಮೂಳೆ ಆಪರೇಷನ್ ಆಗಿದೆ. ಇದರಿಂದ ಜೀವನ ನಡಸೋದು ಕಷ್ಟ ಆಗಿದೆ. ಈಗಿರುವಾಗ ಮಕ್ಕಳ ವಿದ್ಯಾಭ್ಯಾಸ ನಿಲ್ಲುತ್ತೆ ಅನ್ನೊ ಭೀತಿ ಕಾಡ್ತಿದ್ದು ಏನಾದ್ರು ಮಾಡಿ ಮಕ್ಕಳನ್ನ ಓದಿಸಿ ಉನ್ನತ ಹುದ್ದೆಗೆ ಕಳಿಸಬೇಕು ಅನ್ನೋದು ಇವರ ಆಸೆ.
ಬಸವರಾಜರಿಗೆ ಸುಪ್ರಿಯಾ, ಪಲ್ಲವಿ, ಸಹನಾ, ಅಶ್ವಿನಿ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಆಶ್ವಿನಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು ಪ್ರಥಮ ವರ್ಷದಲ್ಲಿ ಶೇ.95 ಅಂಕಗಳನ್ನು ಪಡೆದಿದ್ದಾಳೆ. ಇನ್ನೂ ದ್ವಿತೀಯ ಮಗಳು ಪಲ್ಲವಿ ಸಹ ಎಸ್ಎಸ್ಎಲ್ಸಿಯಲ್ಲಿ ಶೇ.90 ಅಂಕಗಳನ್ನು ಪಡೆದಿದ್ದಾಳೆ. ಹೀಗೆ ಉತ್ತಮ ಅಂಕಗಳನ್ನು ಪಡೆದಿರುವ ಇವರು ಡಾಕ್ಟರ್, ಐಎಎಸ್ ಆಫೀಸರ್ ಆಗುವ ಕನಸನ್ನು ಕಾಣುತ್ತಿದ್ದಾರೆ. ಆದರೆ ತಂದೆಯ ಅನಾರೋಗ್ಯದಿಂದ ತಮ್ಮ ವಿದ್ಯಾಭ್ಯಾಸ ನಿಲ್ಲುವ ಭಯ ಇವರನ್ನು ಕಾಡುತ್ತಿದೆ.
ತನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಟೋ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಮಕ್ಕಳ ವಿದ್ಯಾಭ್ಯಾಸ ಮಾಡಿಸುವ ಶಕ್ತಿ ನಮ್ಮಲ್ಲಿ ಇಲ್ಲ. ದಯವಿಟ್ಟು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಎಂದು ಅವರ ತಾಯಿ ಮಹಾಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ.