ಉಡುಪಿ: ಕೇಂದ್ರ ಸರ್ಕಾರ 500ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ಗಳ ಮೇಲೆ ನಿಷೇಧವೇರಿದ ಬೆನ್ನಲ್ಲೆ ದೇವಸ್ಥಾನದ ಹುಂಡಿಗಳಲ್ಲಿ ರಾಶಿ ರಾಶಿ ಹಣ ಬಿದ್ದಿರುವುದು ಸುದ್ದಿಯಾಗುತ್ತಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನ, ಮಲೆ ಮಹದೇಶ್ವರ ಬೆಟ್ಟದಂತೆ ಇದೀಗ ಉಡುಪಿಯ ದೇವಸ್ಥಾನಗಳಲ್ಲೂ ದಾಖಲೆಯ ಹಣ ಸಂಗ್ರಹವಾಗಿದೆ.
ಕೊಲ್ಲೂರಿನಲ್ಲಿ 71 ಲಕ್ಷ ಸಂಗ್ರಹ: ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಮುಖ ದೇವಸ್ಥಾನ. ವರಮಾನದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿಯೀ ದೇವಸ್ಥಾನದಿಂದ ವರ್ಷಕ್ಕೆ 40 ಕೋಟಿ ರೂಪಾಯಿ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ನೋಟ್ ಬ್ಯಾನ್ ನಂತರ ಕೊಲ್ಲೂರು ದೇವಸ್ಥಾನದ ಹುಂಡಿಗೆ ಬಿದ್ದ ಮೊತ್ತದಲ್ಲೂ ದಾಖಲೆ ಸೃಷ್ಟಿಯಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ದೇವಸ್ಥಾನದ ಹುಂಡಿಗೆ 43 ಲಕ್ಷ ರೂಪಾಯಿ ಬಿದ್ದಿತ್ತು. ಈ ವರ್ಷ 71 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಈ ಪೈಕಿ 1000 ಮತ್ತು 500 ರೂಪಾಯಿಯ ಬ್ಯಾನ್ ಆದ ನೋಟುಗಳ ಮೊತ್ತ 16 ಲಕ್ಷ ರೂಪಾಯಿ. ಜೊತೆಗೆ 450 ಗ್ರಾಂ ಚಿನ್ನ, ಮೂರೂವರೆ ಕೆಜಿ ಬೆಳ್ಳಿ, 2 ಡೈಮಂಡ್ ನೆಕ್ಲೆಸ್ ಕಾಣಿಕೆಯಾಗಿ ಬಂದಿದೆ. ಇದರ ಜೊತೆ ಸೇವಾ ಕೌಂಟರ್ಗೆ ಬಂದ ನಗದಿನ ಲೆಕ್ಕ ಇನ್ನಷ್ಟೇ ಸಿಗಬೇಕಿದೆ.
ಶ್ರೀಕೃಷ್ಣ ಮಠಕ್ಕೂ ಹರಿದುಬಂತು ರಾಶಿ ರಾಶಿ ಹಣ: ಉಡುಪಿ ಶ್ರೀಕೃಷ್ಣಮಠಕ್ಕೂ ಕಂತೆ ಕಂತೆ ಕಾಸು ಬಿದ್ದಿದೆ. ನೋಟ್ ಬ್ಯಾನ್ ಆಗುವ ಹಿಂದಿನ ವಾರ 6 ಲಕ್ಷ ರೂಪಾಯಿ ಹುಂಡಿಗೆ ಬಿದ್ದಿತ್ತು. ಆದ್ರೆ ಕಳೆದ ವಾರದಲ್ಲಿ 14 ಲಕ್ಷ ರೂಪಾಯಿ ಬಿದ್ದಿದೆ. ಅದರಲ್ಲಿ 500 ಮತ್ತು ಸಾವಿರ ರೂಪಾಯಿಯ ಕಂತೆಗಳೂ ಸೇರಿದೆ.
ಲೆಕ್ಕ ತೋರಿಸದ ಕಾಸನ್ನು ಬ್ಯಾಂಕಿಗೆ ಜಮಾ ಮಾಡೋದಕ್ಕೆ ಇನ್ನೊಂದು ತಿಂಗಳ ಕಾಲಾವಕಾಶವಿದೆ. ಉಡುಪಿ ಜಿಲ್ಲೆಯಲ್ಲಿ ಎ ಕ್ಯಾಟಗರಿಯ 25 ದೇವಸ್ಥಾನ, ಬಿ ಕ್ಯಾಟಗರಿಯ 19, ಸಿ ಕ್ಯಾಟಗರಿಯ 759 ದೇವಸ್ಥಾನಗಳಿವೆ. ಇವುಗಳ ಲೆಕ್ಕ ಈ ವಾರದಲ್ಲಿ ನಡೆಯಲಿದೆ.