ನವದೆಹಲಿ: 500 ಹಾಗೂ 1000 ರೂಪಾಯಿ ನೋಟುಗಳನ್ನ ಬ್ಯಾಂಕ್ನಲ್ಲಿ ಠೇವಣಿಯಿಡಲು ಡಿಸೆಂಬರ್ 30ರ ವರೆಗೆ ಮಾತ್ರ ಸಮಯ. ಯಾವುದೇ ಕಾರಣಕ್ಕೂ ವಿಸ್ತರಣೆ ಆಗಲ್ಲ ಅಂತ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಮೂಲಕ ಕಾಳಧನಿಕರಿಗೆ ಪದೇ ಪದೇ ಸರ್ಕಾರ ಎಚ್ಚರಿಕೆ ನೀಡುತ್ತಿದೆ. 2.5 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿವುಳ್ಳ ಖಾತೆಗಳನ್ನು ತೆರಿಗೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಅಲ್ಲದೆ ಕಪ್ಪುಹಣ ಹೊಂದಿರುವವರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ತಮ್ಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಶೇ.50ರಷ್ಟು ತೆರಿಗೆ ನೀಡಿ ಹಾಗೂ ಶೇ.25ರಷ್ಟು ಹಣವನ್ನ 4 ವರ್ಷದವರೆಗೆ ಠೇವಣಿದಾರ ಬಳಸುವಂತಿಲ್ಲ. ಈ ಹಣಕ್ಕೆ ಸರ್ಕಾರ 4 ವರ್ಷದ ಅವಧಿಗೆ ಯಾವುದೇ ಬಡ್ಡಿ ನೀಡುವುದಿಲ್ಲ. ಬದಲಾಗಿ ಬಡವರಿಗೆ ಮೂಲಭೂತ ಅಗತ್ಯತೆಗಳನ್ನು ಒದಗಿಸಲು ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಉಳಿದ ಶೇ.25ರಷ್ಟು ಹಣ ಮಾತ್ರ ಠೇವಣಿದಾರರಿಗೆ ಬಳಸಿಕೊಳ್ಳಲು ಸಿಗುತ್ತದೆ. ಒಂದು ವೇಳೆ ಠೇವಣಿದಾರ ಇದನ್ನು ನಿರಾಕರಿಸಿದ್ರೆ ಶೇ.85 ರಷ್ಟು ಹಣವನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರ ಪಡೆದುಕೊಳ್ಳುತ್ತದೆ.
ಒಂದು ವೇಳೆ ಘೋಷಣೆಯಾಗದ ಕಪ್ಪು ಹಣವನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ರೆ ಆ ಹಣದ ಶೇ.90 ರಷ್ಟು ಭಾಗವನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರ ಪಡೆದುಕೊಳ್ಳಲಿದ್ದು, ಉಳಿದ ಶೇ.10 ರಷ್ಟು ಹಣ ಮಾತ್ರ ಮಾಲೀಕನಿಗೆ ಬಳಸಿಕೊಳ್ಳಲು ಸಿಗುತ್ತದೆ. ಮಂಗಳವಾರದಂದು ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಈ ಹೊಸ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.