– ರೈತ ಹೋರಾಟ ಹತ್ತಿಕ್ಕಲು ಸರ್ಕಾರ ಯತ್ನ
– ಆಯಾ ಜಿಲ್ಲೆಗಳಲ್ಲೇ ಅನ್ನದಾತರ ಬಂಧನ
ಬೆಳಗಾವಿ: ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಬೆಳಗ್ಗೆ 10 ಗಂಟೆ ನಂತರ ಅಧಿವೇಶನ ಶುರುವಾಗಲಿದ್ದು, ಮೊದಲ ದಿನವೇ ಕ್ಷಾಮದ ಬಗ್ಗೆ ಚರ್ಚಿಸಲು ಕೋರಿ ನಿಲುವಳಿ ಮಂಡನೆ ಮಾಡಲು ವಿಪಕ್ಷ ಬಿಜೆಪಿ ಸಿದ್ಧತೆ ಮಾಡ್ಕೊಂಡಿದೆ.
ಇದರ ಜೊತೆಗೆ ಅರೆ ನಗ್ನ ಫೋಟೋ ವೀಕ್ಷಣೆ ಸಂಬಂಧ ಸಚಿವ ತನ್ವೀರ್ ಸೇಠ್ ತಲೆದಂಡಕ್ಕೆ ಬಿಜೆಪಿ ಆಗ್ರಹಿಸುವ ಸಾಧ್ಯತೆಯೂ ಇದೆ. ಇದು ಸರ್ಕಾರಕ್ಕೆ ಮುಜುಗರದ ವಿಚಾರ. ಜೆಡಿಎಸ್ ಈ ಬಾರಿ ಉತ್ತರ ಕರ್ನಾಟಕದ ವಿಚಾರಗಳಿಗೆ ಹೆಚ್ಚು ಆದ್ಯತೆ ಕೊಡಲು ತೀರ್ಮಾನಿಸಿದೆ. ಈ ನಡುವೆ ರೈತರ ಸಾಲ ಮನ್ನಾ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ. ಸಾವಿರಾರು ರೈತರು ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ರೆ ಪ್ರತಿಭಟನೆ ಹತ್ತಿಕ್ಕಲು ನಿರ್ಧರಿಸಿರುವ ಸರ್ಕಾರ, ರೈತರನ್ನು ಭಾನುವಾರ ರಾತ್ರಿಯಿಂದಲೇ ಬಂಧಿಸುತ್ತಿದೆ.
ಆಯಾ ಜಿಲ್ಲೆಗಳಲ್ಲೇ ಅನ್ನದಾತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಮುಧೋಳದಲ್ಲಿ 10 ರೈತರನ್ನ ಅರೆಸ್ಟ್ ಮಾಡಲಾಗಿದೆ. ಇದನ್ನು ಖಂಡಿಸಿ ಭಾನುವಾರ ರಾತ್ರಿ ರೈತ ಸಂಘದ ನೇತೃತ್ವದಲ್ಲಿ ಬೆಳಗಾವಿ ಕಮೀಷನರೇಟ್ ಮುಂದೆ ಪ್ರತಿಭಟನೆ ನಡೀತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸುವರ್ಣಸೌಧದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜೊತೆಗೆ ಪ್ರತಿಭಟನೆ ಮಾಡಲು ಜಿಲ್ಲಾಡಳಿತವೇ ಸ್ಥಳ ನಿಗದಿಪಡಿಸಿ ಟೆಂಟ್ ಕೂಡ ನಿರ್ಮಿಸಿಕೊಟ್ಟಿದೆ.
ಈ ಬಾರಿಯೂ ಅಧಿವೇಶನಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಾವ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನೀಡಿಲ್ಲ.
ಸುಗಮ ಸದನಕ್ಕೆ ಸ್ಪೀಕರ್ ತಂತ್ರ: ಗದ್ದಲ ಗಲಾಟೆಗಳಿಗೆ ಸದನ ಬಲಿ ಆಗೋದನ್ನ ತಡೆಯಲು ವಿಧಾನಸಭೆ ನಿಯಮಾವಳಿಗಳನ್ನ ತಿದ್ದುಪಡಿ ಮಾಡಿಕೊಂಡೇ ಕಲಾಪ ಆರಂಭಿಸಲು ಸ್ಪೀಕರ್ ಕೋಳಿವಾಡ ಮುಂದಾಗಿದ್ದು, ವಿಧಾನಸಭೆ ಸಭೆ ನಿಯಮಗಳಿಗೆ ತಿದ್ದುಪಡಿ ಕರಡು ರೆಡಿ ಮಾಡಿದ್ದಾರೆ. ಕಲಾಪ ಆರಂಭವಾಗ್ತಿದ್ದ ಹಾಗೇ ತಿದ್ದುಪಡಿ ಕರಡನ್ನು ಸಭೆಯ ಮುಂದಿಡಲು ತೀರ್ಮಾನಿಸಿದ್ದಾರೆ. ಬೆಳಗಿನ ಕಲಾಪಗಳಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಅವಕಾಶವಿಲ್ಲ. ಕಲಾಪ ಆರಂಭದ 3 ಗಂಟೆಗಳ ಕಾಲ ಪ್ರಶ್ನೋತ್ತರ. ಶೂನ್ಯ ವೇಳೆ ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು. ಈ ಬಾರಿ ಅಧಿವೇಶನಕ್ಕೆ ಶಾಸಕರು ಆಪ್ತರನ್ನ ಕರೆತರುವ ಹಾಗಿಲ್ಲ. ಆಪ್ತರಿಗೆಲ್ಲ ವಸತಿ ಕಲ್ಪಿಸಲು ಸಾಧ್ಯವಿಲ್ಲ ಅಂತಾ ಸ್ಪೀಕರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಅಲ್ಲದೆ ಎಲ್ಲಾ ಶಾಸಕರಿಗೂ ಬೆಳಗಾವಿಯಲ್ಲೇ ವಸತಿ ವ್ಯವಸ್ಥೆ ಸಾಧ್ಯವಿಲ್ಲ. ಕೆಲವರಿಗೆ ಹುಬ್ಬಳ್ಳಿಯಲ್ಲಿ ಕಲ್ಪಿಸಲಾಗಿದೆ. ಇದೇ ಕಾರಣ ನೀಡಿ ಸಭೆಗೆ ಗೈರಾಗಬೇಡಿ ಅಂತಾ ಸ್ಪೀಕರ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.