ಉಡುಪಿ: ನಾಡಿನಾದ್ಯಂತ ದೀಪಾವಳಿಯ ಸಂಭ್ರಮ ಜೋರಾಗಿದೆ. ಮಕ್ಕಳೆಲ್ಲಾ ಪಟಾಕಿ ಸಿಡಿಸುತ್ತಿದ್ದರೆ, ಮಹಿಳೆಯರು ಹಬ್ಬದೂಟ ತಯಾರಿಯಲ್ಲಿದ್ದಾರೆ. ಇತ್ತ ಕಡೆಗೋಲು ಕೃಷ್ಣನ ಊರು ಉಡುಪಿಯಲ್ಲಿ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಲಾಯ್ತು. ಶ್ರೀಕೃಷ್ಣನಿಗೆ ವಿಶೇಷ ಪೂಜೆ ನಡೆದರೆ- ಅಷ್ಟಮಠದ ಸ್ವಾಮೀಜಿಗಳಿಗೆ ಭಕ್ತರು ತೈಲ ಅಭ್ಯಂಜನ ಮಾಡಿಸಿದರು.
ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿಯನ್ನು ಎಣ್ಣೆ ಸ್ನಾನದ ಮೂಲಕ ಬರಮಾಡಿಕೊಳ್ಳಲಾಯ್ತು. ಕಡೆಗೋಲು ಶ್ರೀಕೃಷ್ಣನಿಗೆ ಪರ್ಯಾಯ ಸ್ವಾಮೀಜಿ ಪಶ್ಚಿಮ ಜಾಗರ ಪೂಜೆ ಮಾಡಿದರು. ಮುಂಜಾನೆ ನಾಲ್ಕು ಗಂಟೆಗೆ ಈ ವಿಶೇಷ ಪೂಜೆಯನ್ನು ಸ್ವಾಮೀಜಿ ನೆರವೇರಿಸಿದರು.
ಪೂಜೆಯ ನಂತರ ಚಂದ್ರ ಶಾಲೆಯಲ್ಲಿ ಕೃಷ್ಣಾಪುರ ಸ್ವಾಮೀಜಿ, ವಿದ್ಯಾವಲ್ಲಭ- ವಿಶ್ವವಲ್ಲಭ, ವಿಶ್ವಪ್ರಸನ್ನ ತೀರ್ಥಶ್ರೀಪಾದರು ಪರಸ್ಪರ ಎಣ್ಣೆ ಹಚ್ಚಿಕೊಂಡು ಎಣ್ಣೆ ಸ್ನಾನಕ್ಕೆ ಚಾಲನೆ ಕೊಟ್ಟರು. ನೂರರು ಭಕ್ತರು ಎಣ್ಣೆ ಪ್ರಸಾದ ಸ್ವೀಕರಿಸಿದರು.
ಮಠದ ಚೌಕಿಯಲ್ಲಿ ಪರ್ಯಾಯ ಸ್ವಾಮೀಜಿ ಸೇರಿದಂತೆ ಹಾಜರಿದ್ದ ಎಲ್ಲಾ ಸ್ವಾಮೀಜಿಗಳಿಗೆ ತೈಲ ಮಾಲೀಷ್ ನಡೆಯಿತು. ಎಣ್ಣೆಯಲ್ಲೇ ಅಭ್ಯಂಜನ ಮಾಡಿಸಿದ್ರು. ಮಠದ ದೊಡ್ಡ ಗುಡಾಣದಲ್ಲಿ ಬಿಸಿನೀರು ಕುದಿಯುತ್ತಲೇ ಇದೆ. ದಿನಪೂರ್ತಿ ಅಭ್ಯಂಜನ ನಡೆಯುತ್ತದೆ. ಪೇಜಾವರಶ್ರೀ ಈ ಬಾರಿಯ ದೀಪಾವಳಿ ಸಂದೇಶ ನೀಡಿದರು.
ಮಠದ ಸಿಬ್ಬಂದಿ ಪರಸ್ಪರ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು. ಕೃಷ್ಣಾಪುರ ವಿದ್ಯಾಸಾಗರ ಶ್ರೀ, ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರುಶ್ರೀಗಳು, ಸೋದೆ ಶ್ರೀಗಳು ಎಣ್ಣೆಸ್ನಾನದಲ್ಲಿ ಪಾಲ್ಗೊಂಡರು.
ಪಶ್ಚಿಮಜಾಗರ ಪೂಜೆಯ ಸಂದರ್ಭ ನೂರಾರು ಭಕ್ತರು ಮಠದೊಳಗೆ ದೀಪ ಬೆಳಗಿದರು. ಕೃಷ್ಣಮಠ ಸಂಪೂರ್ಣವಾಗಿ ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು.