ನವದೆಹಲಿ:ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ.
ಜಡ್ಜ್ ಇಲ್ಲದ ಕಾರಣ ದೇಶದಲ್ಲಿ ಕೋರ್ಟ್ ರೂಂಗಳಿಗೆ ಬೀಗ ಹಾಕಲಾಗಿದೆ. ಕರ್ನಾಟಕದಲ್ಲಿ ಈ ಕಾರಣಕ್ಕೆ ಬೀಗ ಹಾಕಲಾಗಿದೆ. ಇದೇ ರೀತಿಯಾಗಿ ನೀವು ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೀಗ ಹಾಕಬೇಕು ಎಂದು ಯೋಚಿಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧಿಶ ಟಿಎಸ್ ಠಾಕೂರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಡ್ಜ್ ಇಲ್ಲದ ಕಾರಣ ಕಾರಣ ನ್ಯಾಯದಾನ ವಿಳಂಬವಾಗುತ್ತಿದೆ. ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಜಡ್ಜ್ ಗಳ ಹೆಸರನ್ನು ಕಳುಹಿಸಿ 9 ತಿಂಗಳು ಆಗಿದೆ. ಆದರೆ ಇದುವರೆಗೆ ಏನು ಆಗಿಲ್ಲ. ನೀವು ಯಾರಿಗೆ ಕಾಯುತ್ತಿದ್ದೀರಿ. ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ಆಗಬೇಕೇ ಎಂದು ಎಂದು ಖಾರವಾಗಿ ಅವರು ಪ್ರಶ್ನಿಸಿದರು.
ನ್ಯಾಯಾಧಿಶರ ನೇಮಕ ಸಂಬಂಧ ಕೊಲಿಜಿಯಂ ಜಡ್ಜ್ ಗಳ ಹೆಸರನ್ನು ಈಗಾಗಲೇ ಕಳುಹಿಸಿದೆ. ಆದರೆ ಸರ್ಕಾರ ಮಾತ್ರ ಮೌನವಾಗಿ ಕುಳಿತುಕೊಂಡಿದೆ. ನಿಮಗೆ ಏನಾದರೂ ಅದರಲ್ಲಿ ಸಮಸ್ಯೆ ಕಂಡು ಬಂದರೆ ಪಟ್ಟಿ ಕಳುಹಿಸಿ ಕೊಡಿ ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ತ್ರಿಸದಸ್ಯ ಪೀಠ ನವೆಂಬರ್ 11ಕ್ಕೆ ಮುಂದೂಡಿತು.
ನ್ಯಾಯಾಧೀಶರ ನೇಮಕದಲ್ಲಿ ಕೇಂದ್ರ ಸರ್ಕಾರದ ವಿಳಂಬ ನೀತಿಗೆ ಈ ವರ್ಷದ ಅಗಸ್ಟ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನೀವು ನ್ಯಾಯಾಧೀಶರನ್ನು ನೇಮಕ ಮಾಡದೇ ಶೀಘ್ರವಾಗಿ ಪ್ರಕರಣಗಳನ್ನು ಪೂರ್ಣಗೊಳಿಸುವಂತೆ ನಮ್ಮ ಮೇಲೆ ಒತ್ತಡ ತರಬೇಡಿ ಎಂದು ತ್ರಿಸದಸ್ಯ ಪೀಠ ಚಾಟಿ ಬೀಸಿತ್ತು.
ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ 75 ಜಡ್ಜ್ ಗಳ ಹೆಸರನ್ನು ಫೆಬ್ರವರಿಯಲ್ಲೇ ಶಿಫಾರಸ್ಸು ಮಾಡಲಾಗಿದ್ದರೂ ಈ ವರೆಗೂ ಒಂದೇ ಒಂದು ಹೆಸರನ್ನು ಅಂಗೀಕರಿಸಲಾಗಿಲ್ಲ. ಒಂದು ವೇಳೆ ಸಮಸ್ಯೆ ಇದ್ದರೆ ಪಟ್ಟಿಯನ್ನು ವಾಪಸ್ ಕಳುಹಿಸಿ. ಆದರೆ ತಡೆಹಿಡಿಯಬೇಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಅಂದು ಸೂಚಿಸಿತ್ತು.
ಇದೇ ಏಪ್ರಿಲ್ನಲ್ಲಿ ದೆಹಲಿಯಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಮುಖ್ಯನ್ಯಾಯಾಧೀಶರ ಜಂಟಿ ಸಮ್ಮೇಳನ ನಡೆದಿತ್ತು. ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶರ ಕೊರತೆ ಮತ್ತು ನ್ಯಾಯಾದಾನ ವಿಳಂಬದಿಂದಾಗಿ ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸಿ ನ್ಯಾ.ಠಾಕೂರ್ ಕಣ್ಣೀರಿಟ್ಟಿದ್ದರು. ಈ ವೇಳೆ ಪ್ರಧಾನಿ ಮೋದಿ ಈ ಸಮಸ್ಯೆಯನ್ನು ಬಗೆ ಹರಿಸಲಾಗುವದು ಎಂದು ಭರವಸೆ ನೀಡಿದ್ದರು.
ಆಗಸ್ಟ್ 15 ರಂದು ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಠಾಕೂರ್, ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನ್ಯಾಯಾಧೀಶರ ನೇಮಕಾತಿ ಬಗ್ಗೆ ಪ್ರಧಾನಿ ಮೋದಿ ಮಾತನಾಡಬಹುದು ಎಂದುಕೊಂಡಿದ್ದೆ. ಆದರೆ ಮೋದಿ ನ್ಯಾಯಾಧೀಶರ ನೇಮಕಾತಿ ಬಗ್ಗೆ ಯಾವುದೇ ವಿಚಾರ ಪ್ರಸ್ತಾಸಿಲ್ಲ, ಭರವಸೆ ಹುಸಿಗೊಳಿಸಿದ್ದಾರೆ. ನಾನು ಈಗಾಗಲೇ ಉನ್ನತ ಹುದ್ದೆಯನ್ನು ತಲುಪಿಯಾಗಿದೆ. ಹೀಗಾಗಿ ನನಗೆ ಅಭಿಪ್ರಾಯ ಮಂಡಿಸಲು ಯಾವುದೇ ಹಿಂಜರಿಕೆ ಇಲ್ಲ ಎಂದು ಅವರು ಖಾರವಾಗಿ ಹೇಳಿದ್ದರು.