Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಯಶ್ ಅಭಿಮಾನಿಗಳಿಗೆ ಅಮಲೇರಿಸುತ್ತಾನೆ `ಸಂತು’ !

$
0
0

ಸಾಮಾನ್ಯ ಪ್ರೇಕ್ಷಕನಿಗೆ `ಸಂತು’ ಬರೀ ಭ್ರಾಂತು !

ಬ್ಬ ಸ್ಟಾರ್ ಅಥವಾ ಒಬ್ಬ ಹೀರೊ ಒಂದು ಸಿನಿಮಾ ಯಾರಿಗಾಗಿ ಮಾಡಬೇಕು.? ತನ್ನ ಅಭಿಮಾನಿಗಳಿಗೆ ಮಾತ್ರವಾ ಅಥವಾ ಜನ ಸಾಮಾನ್ಯರಾದ ಕನ್ನಡಿಗರಿಗಾ ? ಸಂತು ಚಿತ್ರವನ್ನು ನೋಡಿದರೆ ಇಂಥ ಅನುಮಾನ ಕಾಡುವುದು ಸಹಜ. ಯಾಕೆಂದರೆ ಇದರಲ್ಲಿ ಯಶ್ ಫ್ಯಾನ್ಸ್ ಮಾತ್ರ ಇಷ್ಟವಾಗುವ ದೃಶ್ಯ, ಪಂಚಿಂಗ್ ಹೆಸರಿನಲ್ಲಿ ಅಹಂಕಾರದಂತೆ ಕೇಳಿಸುವ ಡೈಲಾಗ್, ಬಿಲ್ಡಪ್ ಫೈಟಿಂಗ್.. ಇಡೀ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.

ಹೌದು, ಇದು ಯಶ್ ಅಭಿಮಾನಿಗಳಿಗೆ ಮಾತ್ರ ಹೇಳಿ ಮಾಡಿಸಿದ ಚಿತ್ರ. ಅವರಿಗೆ ಏನೇನು ಬೇಕೋ ಎಲ್ಲವೂ ಇದರಲ್ಲಿದೆ. ಹೀಗಾಗಿ ಅವರಿಗೆ ಇದು ಇಷ್ಟವಾಗಬಹುದು. ಆದರೆ ಜನ ಸಾಮಾನ್ಯರಿಗೆ ಇಲ್ಲಿರುವ ಕೆಲವು ಮಾತು, ದೃಶ್ಯಗಳನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಅಂದರೆ ನಿರ್ದೇಶಕರು ಬರೀ ಯಶ್ ಫ್ಯಾನ್ಸ್ ಗಾಗಿ ಮಾತ್ರ ಇಲ್ಲಿಯ ಕತೆಯನ್ನು ಹೆಣೆದಿದ್ದಾರೆ. ಫ್ಯಾನ್ಸ್ ಮಾತ್ರ ನೋಡಿದರೆ ಸಿನಿಮಾ ಸೂಪರ್ ಹಿಟ್ ಆಗುತ್ತದಾ? ಉತ್ತರವನ್ನು ಕಾಲವೇ ಹೇಳುತ್ತದೆ.

santu-straight-forward-1

ಕತೆಯ ಎಳೆ ತುಂಬಾ ಚಿಕ್ಕದು. ಸಂತು ಎನ್ನುವ ಸ್ಟ್ರೇಟ್ ಫಾರ್ವರ್ಡ್ ಹುಡುಗ. ಅವನಿಗೆ ಬೇರೆ ಕೆಲಸ ಇರುವುದಿಲ್ಲ. ಆದರೂ ಆತನನ್ನು ಬಾಸ್ ಎಂದು ಬಿಂಬಿಸಲಾಗಿದೆ. ಹೊರಗೆ ಹೇಗೋ ಮನೆ ಒಳಗೂ ಅವನದೇ ಬಾಸಿಸಂ ವರ್ತನೆ. ಆದರೂ ಆತ ಅಪ್ಪ ಅಮ್ಮನ ಪ್ರೀತಿಯ ಮಗ. ಅವನನ್ನು ಕೆಣಕಿದರೆ ದಂಡಂ ದಶಗುಣಂ. ಆತನಿಗೆ ನಾಯಕಿ ಸಿಗುತ್ತಾಳೆ. ಆಕೆಯನ್ನು ಆತ ಪ್ರೀತಿಸುತ್ತಾನೆ. ಅದನ್ನು ಹೇಳುವಷ್ಟರಲ್ಲಿ ಆಕೆ ಅದಾಗಲೇ ತನ್ನ ಮಾಮನನ್ನು ಮದುವೆಯಾಗಲು ತಯಾರಾಗಿರುತ್ತಾಳೆ.

ಆಕೆ ಬೇರೊಬ್ಬನ ಜೊತೆ ಎಂಗೇಜ್ ಆಗಿರುವುದು ಗೊತ್ತಾದರೂ ಆತ ಆಕೆಯನ್ನೇ ಮದುವೆಯಾಗುವುದಾಗಿ ನಿರ್ಧಾರ ಮಾಡುತ್ತಾನೆ. ಆಕೆಯ ಮಾಮ ಒಂದೊಮ್ಮೆ ಡಾನ್ ಆಗಿರುತ್ತಾನೆ. ಆದರೆ ಆಕೆಗಾಗಿ ಎಲ್ಲವನ್ನೂ ಬಿಟ್ಟಿರುತ್ತಾನೆ ಅಥವಾ ಹಾಗಂತ ಆಕೆಯನ್ನು ನಂಬಿಸಿರುತ್ತಾನೆ. ಸಂತು ತನ್ನ ಹುಡುಗಿಯನ್ನು ಪ್ರೀತಿಸುವ ವಿಷಯ ಆ ಮಾಮನಿಗೆ ಗೊತ್ತಾಗುತ್ತದೆ. ಅವಳನ್ನು ಹೇಗೆ ಮದುವೆಯಾಗುತ್ತೀಯಾ ನಾನೂ ನೋಡ್ತಿನಿ ಎಂದು ಸಂತುಗೆ ಆತ ಸವಾಲು ಹಾಕುತ್ತಾನೆ.

santu-straight-forward-2

ನಾಯಕಿ ಮತ್ತು ಆ ಮಾಮನ ಮದುವೆ ತಯಾರಿ ನಡೆಯುತ್ತದೆ. ನೀನು ನನ್ನ ಮನೆಯಲ್ಲೇ ಇರು, ಏನು ಮಾಡ್ತಿಯೋ ಮಾಡು, ಅದು ಹೇಗೆ ಆಕೆಯನ್ನು ನೀನು ಮದುವೆ ಆಗುತ್ತೀಯಾ ನೋಡ್ತೀನಿ ಎಂದು ಆ ಮಾಮ, ಸಂತುಗೆ ಸವಾಲು ಹಾಕುತ್ತಾನೆ. ಆ ಮನೆಯಲ್ಲಿದ್ದು ಸಂತು ಏನೇನು ಮಾಡುತ್ತಾನೆ, ಆ ಮಾಮ ಆತನಿಗೆ ಏನೇನು ಆಟ ಆಡಿಸುತ್ತಾನೆ, ಅದನ್ನು ಸಂತು ಹೇಗೆ ನಿವಾರಿಸುತ್ತಾನೆ, ಕೊನೆಗೆ ನಾಯಕಿಯನ್ನು ಮನವೊಲಿಸಲು ಏನು ಮಾಡುತ್ತಾನೆ ಎನ್ನುವುದು ಉಳಿದ ಕತೆ.

ನಾಯಕ ನಾಯಕಿಯನ್ನು ಹೇಗೆ ಗೆಲ್ಲುತ್ತಾನೆ, ಮದುವೆ ಆಗುತ್ತಾನೆ ಎನ್ನುವುದಷ್ಟೇ ಕತೆಯ ಎಳೆ. ಮೊದಲಾರ್ಧ ಎಳ್ಕೊಂಡು ಹೋಗುತ್ತದೆ, ದ್ವಿತೀಯಾರ್ಧವನ್ನು ನೀವೇ ತಳ್ಕೊಂಡು ಹೋಗಬೇಕು. ನಾಯಕ, ನಾಯಕಿ ಹಿಂದೆ ಬೀಳುವುದು, ಇಬ್ಬರ ನಡುವೆ ಪ್ರೀತಿ ಹುಟ್ಟುವುದು ಇತ್ಯಾದಿ ದೃಶ್ಯಗಳಿಂದ ಮೊದಲ ಭಾಗ ನೋಡಿಸಿಕೊಂಡು ಹೋಗುತ್ತದೆ. ಎರಡನೇ ಬಾಗದಲ್ಲಿ ನಾಯಕ ನಾಯಕಿಯ ಮದುವೆ ಮತ್ತು ಡಾನ್ ಜೊತೆಗಿನ ನಾಯಕನ ಜೂಟಾಟ ನಡೆಯುತ್ತದೆ. ಆದರೆ ನಿರ್ದೇಶಕ ಯಾಕೋ ಇಷ್ಟರಲ್ಲೇ ಮುಗಿಸಬೇಕಾಗಿದ್ದನ್ನು ಅಷ್ಟುದ್ದ ಎಳೆದಿದ್ದಾರೆ.

ಒನ್ಸ್ ಅಗೇನ್ ಯಶ್ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಎಲ್ಲ ಕಡೆ ಅವರೇ ಇರುತ್ತಾರೆ. ಕೆಲವು ದೃಶ್ಯಗಳನ್ನು ಬಿಟ್ಟರೆ ಪ್ರತಿ ಫ್ರೇಮ್‍ನಲ್ಲಿ ಯಶ್ ಮಾತ್ರವೇ ಮಿಂಚಿಂಗ್. ಅಭಿನಯದ ಬಗ್ಗೆ ಕೆಮ್ಮಂಗಿಲ್ಲ. ಫೈಟಿಂಗ್, ಡೈಲಾಗ್ ಡೆಲಿವರಿ, ಕಾಮಿಡಿ ಟೈಮಿಂಗ್… ಎಲ್ಲವೂ ಕ್ಯಾಮೆರಾ ಎದುರಿಲ್ಲದಂತೆ ನಿಭಾಯಿಸಿದ್ದಾರೆ. ಆದರೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕೊಂಚ ಡಲ್ಲು. ಆದರೆ ಒಂದು ಮಾತನ್ನು ಹೇಳಬೇಕು. ಕೆಲವು ಪಂಚಿಂಗ್ ಡೈಲಾಗ್‍ಗಳು ಅವರಿಗಿರುವ ಇಮೇಜ್‍ಗಿಂತ ಭಾರ ಭಾರ. `ನನ್ನನ್ನು ಅದುರಿಸೋಕೆ ಬಂದವರೆಲ್ಲಾ ಎಲ್ಲೋ ಉದುರಿ ಹೋಗಿದ್ದಾರೆ…’ ಎನ್ನುವಂಥ ಸಂಭಾಷಣೆ ಯಾಕೋ ಜಾಸ್ತಿ ಆಯ್ತಲ್ಲ ಅನಿಸುವುದು ಪಕ್ಕಾ.

ಅದೇ ರೀತಿ ಅನೇಕ ಸಂಭಾಷಣೆಗಳನ್ನು ಅನೀಲ್ ಕುಮಾರ್ ಬರೆದಿದ್ದಾರೆ. ಹುಡುಗರ ಮುಖಕ್ಕಿಂತ ಕ್ಯಾರೆಕ್ಟರ್ ಮುಖ್ಯ ಎನ್ನುವ ನೀತಿ ಕಮ್ ಪ್ರೀತಿ ಪಾಠಗಳಿಗೂ ಯಶ್ ಧ್ವನಿಯಾಗಿದ್ದಾರೆ. ಇನ್ನು ರಾಧಿಕಾ ಪಂಡಿತ್ ಕೂಡ ನಾನೇನೂ ಕಮ್ಮಿ ಇಲ್ಲ ಎಂಬಂತೆ ನಟಿಸಿದ್ದಾರೆ. ಆದರೆ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ರಾಧಿಕಾ ಯಾಕೋ ಸುಸ್ತಾಗಿದ್ದಾರೆ. ಪರಭಾಷೆಯಿಂದ ಬಂದಿರುವ ಶಾಮ್‍ಗೆ ಯಾವ ಆಂಗಲ್‍ನಿಂದಲೂ ಡಾನ್ ಕಳೆ ಇಲ್ಲ. ಅವರು ಸೀರಿಯಸ್ ಪೀಸೊ, ಕಾಮಿಡಿ ಪೀಸೊ ಗೊತ್ತಾಗುವುದಿಲ್ಲ. ಕಡ್ಡಿಪುಡಿ ಚಂದ್ರು ಮತ್ತೆ ಮಿಂಚಿದ್ದಾರೆ. ಅನಂತ್ ನಾಗ್‍ಗೆ ಹೆಚ್ಚು ಕೆಲಸ ಇಲ್ಲ. ರವಿಶಂಕರ್ ಇಷ್ಟೇ ಇಷ್ಟು ಕಾಣಿಸಿಕೊಂಡರೂ ಶಿಳ್ಳೆ ಗಿಟ್ಟಿಸುತ್ತಾರೆ.

santu-straight-forward-3

ಹರಿಕೃಷ್ಣ ಸಂಗೀತದಲ್ಲಿ ಒಂದು ಹಾಡು ಕೇಳುವಂತಿದೆ. ಹಿನ್ನೆಲೆ ಸಂಗೀತ ಜೋಶ್ ಮೂಡಿಸುತ್ತದೆ. ಕ್ಯಾಮೆರಾ ಕೆಲಸವೂ ನಿಯತ್ತಾಗಿದೆ. ವಿದೇಶದಲ್ಲಿ ಚಿತ್ರಿಸಿದ ಡ್ಯೂಯೆಟ್ ಸಾಂಗ್‍ನ ಲೊಕೇಶನ್ ಹೊಚ್ಚ ಹೊಸದಾಗಿದೆ ಮತ್ತು ಕಣ್ಣು ತಣಿಸುತ್ತದೆ. ನೀರಿನ ತೊಟ್ಟಿಯಲ್ಲಿ ಡೆಲಿವರಿ ಮಾಡಿಸುವ ಹೊಸ ಐಡಿಯಾವನ್ನು ನಿರ್ದೇಶಕರು ಕಂಡು ಕೊಂಡಿದ್ದಾರೆ. ಕನ್ನಡಕ್ಕೆ ಅಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲೇ ಇದು ಪ್ರಥಮ ಎನ್ನುವುದು ಹೊಗಳಿಕೆ ಅಲ್ಲ ತೆಗಳಿಕೆಯೂ ಅಲ್ಲ. ಅಂದ ಹಾಗೆ ಆ ದೃಶ್ಯದಲ್ಲಿ ಯಶ್ ಅಭಿನಯ ಕಣ್ಣು ಸಣ್ಣಗೆ ತೇವ ಮಾಡುತ್ತದೆ.

ನಾಯಕ ಮತ್ತು ವಿಲನ್ ನಡುವಿನ ಕ್ಲ್ಯೆಮ್ಯಾಕ್ಸ್ ಮುಂಚಿನ ಜೂಟಾಟದ ಎಳೆ ಹಳೆಯದಾದರೂ ಇಂಟ್ರೆಸ್ಟಿಂಗ್ ಆಗಿದೆ. ನಿರ್ದೇಶಕರ ಶ್ರಮ ಅದರಲ್ಲಿ ಎದ್ದು ಕಾಣುತ್ತದೆ. ಆ ಸಮಯದಲ್ಲಿನ ದೇವಸ್ಥಾನದ ಒಂದು ಸ್ಟಂಟ್ ಸೀನ್ ಸೂಪರ್. ಪಕ್ಕಾ ಹೊಸ ರೀತಿಯ ಫೈಟಿಂಗ್ ಕಂಪೋಸ್ ಮಾಡಲಾಗಿದೆ. ಯಶ್ ಕೂಡ ಆ ದೃಶ್ಯದಲ್ಲಿ ತನ್ಮಯವಾಗಿ ನಟಿಸಿದ್ದಾರೆ. ನಕಲಿ ಡಾನ್ ಆಗಿ ಎಂಟ್ರಿ ಕೊಡುವ ರವಿಶಂಕರ್ ಸೀನ್ ಕೂಡ ಮಜಾ ಕೊಡುತ್ತದೆ. ಅಲ್ಲಲ್ಲಿ ಬರುವ ಟ್ವಿಸ್ಟ್‍ಗಳು ಮುದ ಕೊಡುತ್ತವೆ. ಆದರೆ ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಾಗುವಂತಿದೆ ಇಡೀ ಚಿತ್ರ ಕತೆ.

santu-straight-forward-6

ಮೊದಲ ಭಾಗ ನಿಮ್ಮನ್ನು ಎಳ್ಕೊಂಡು ಹೋಗುತ್ತದೆ. ಆದರೆ ದ್ವಿತೀಯಾರ್ಧವನ್ನು ನೀವೇ ತಳ್ಳಿಕೊಂಡು ಹೋಗಬೇಕು. ಹೀಗಂತ ಹೇಳಿದರೆ ನಿರ್ದೇಶಕ ಮಹೇಶ್ ರಾವ್ ಬೇಜಾರು ಮಾಡಿಕೊಳ್ಳಬಾರದು. ಎರಡನೇ ಭಾಗಕ್ಕೆ ಇನ್ನಷ್ಟು ಕತ್ತರಿ ಹಾಕಬಹುದಿತ್ತು. ತಿಲಕ್ ಮತ್ತು ಆತನ ಪತ್ನಿಯ ಪಾತ್ರ ಕತೆಗೆ ಅವಶ್ಯಕತೆ ಇದೆ. ಆದರೆ ಅದನ್ನು ಎಳೆಯುವ ಅವಶ್ಯಕತೆ ಇರಲಿಲ್ಲ. ಹಾಗೆಯೇ ನೀತಿ ಪಾಠ, ಉಪದೇಶದಂಥ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಆದರೆ ಯಶ್ ಇಮೇಜ್ ಬೆಳೆಸುವುದಕ್ಕೊ ಅಥವಾ ಇಳಿಸುವುದಕ್ಕೋ ಅವುಗಳಿಗೆ ಜಾಗ ಮಾಡಿಕೊಡಲಾಗಿದೆ.

ಹೀಗೆ ಒಂದಿಡೀ ಚಿತ್ರದ ಹಲವಾರು ದೃಶ್ಯಗಳು ಇಷ್ಟವಾಗುತ್ತವೆ. ಕೆಲವು ಕಷ್ಟವಾಗುತ್ತವೆ. ಯಶ್ ಫ್ಯಾನ್ಸ್‍ಗೆ ಎಲ್ಲವೂ ಇಷ್ಟ. ಉಳಿದ ಜನರಿಗೂ ಹಾಗಾಗಬೇಕೆಂದಿಲ್ಲ. ಒಂದು ಚಿತ್ರ ಕೇವಲ ಹೀರೊ ಮೇಲೆ ಅವಲಂಬಿತವಾದರೆ ಒಳ್ಳೆಯದು ಅಗುತ್ತದೆ ಕೆಟ್ಟದ್ದೂ ಆಗುತ್ತದೆ. ಸಂತು ಏನಾಗುತ್ತದೆ ಎಂದು ಮುಂದಿನ ದಿನಗಳಲ್ಲಿ ಜನರೇ ಹೇಳುತ್ತಾರೆ. ಅಂದ ಹಾಗೆ `ಫ್ಯಾನ್ಸ್ ನೋಡಿದರೆ ನನ್ನ ಚಿತ್ರ ಗೆಲ್ಲುತ್ತದೆ …’ ಎಂದು ಯಶ್ ಹೇಳಿದ್ದಾರೆ. `ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎನ್ನುವುದನ್ನು ಈ ಚಿತ್ರವೇ ನಿರ್ಧರಿಸುತ್ತದೆ…’ ಎನ್ನುವ ಮಾತೂ ಹೇಳಿದ್ದಾರೆ. ಆದರೆ ಒಂದು ಸಿನಿಮಾ ಗೆದ್ದ ತಕ್ಷಣ ಜನರು ಅದರ ನಾಯಕನನ್ನೂ ಪ್ರೀತಿಸುತ್ತಾರೆ ಎನ್ನುವುದು ಸುಳ್ಳು. ಬರೀ ನಾಯಕನಿಂದಲೇ ಒಂದು ಚಿತ್ರ ಗೆಲ್ಲುವುದಿಲ್ಲ. ಒಬ್ಬರಿಗೆ ರಾಧಿಕಾ ಇಷ್ಟವಾಗಿ ಸಿನಿಮಾ ನೋಡಬಹುದು. ಇನ್ನೊಬ್ಬರು ಸಂಗೀತಕ್ಕೆ ಮಾರು ಹೋಗಬಹುದು. ಅಲ್ಲವೇ..?

– ಮಹೇಶ್ ದೇವಶೆಟ್ಟಿ

santu-straight-forward-4 santu-straight-forward-5 santu-straight-forward-7

 


Viewing all articles
Browse latest Browse all 80042