– 2 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ವಿರೋಧ
– ತಜ್ಞರ ವರದಿ ಬಗ್ಗೆ ಇಂದು ವಾದ ಮಂಡನೆ ಸಾಧ್ಯತೆ
ಬೆಂಗಳೂರು: ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಆರಂಭವಾಗಿದ್ದು ಇಂದೂ ಕೂಡ ಮುಂದುವರಿಯಲಿದೆ.
ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಇಂದಿಗೆ ಮುಂದೂಡಿಕೆ ಮಾಡಿತ್ತು. ಮಂಗಳವಾರದಂದು ಮಧ್ಯಂತರ ಆದೇಶ ನೀಡಿರುವ ಪೀಠ ಮುಂದಿನ ಆದೇಶದ ತನಕ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು.
ಇಂದಿನ ವಿಚಾರಣೆ ವೇಳೆ ಆ ಆದೇಶವನ್ನು ವಾಪಸ್ ಪಡೆಯುವಂತೆ ಕರ್ನಾಟಕ ವಾದ ಮಂಡಿಸಲಿದೆ. ಮುಖ್ಯ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಕಿಲ್ಲ. ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ಆದೇಶ ಸರಿಯಿಲ್ಲ ಅನ್ನೋ ಬಗ್ಗೆಯೂ ವಾದ ನಡೆಯಲಿದೆ. ಅದರ ಜೊತೆಗೆ ಕೇಂದ್ರ ಸರ್ಕಾರವೇ ಸೂಚಿಸಿದಂತೆ ಎರಡೂ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿ ಬಗ್ಗೆಯೂ ಗಮನಸೆಳೆಯುವ ಸಾಧ್ಯತೆಯಿದೆ.