– ಜಲಾಶಯಗಳ ವೈಮಾನಿಕ ಸಮೀಕ್ಷೆ ನಡೆಸಿದ ಎಚ್ಡಿ ದೇವೇಗೌಡ
ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಕಾವೇರಿ ವಿವಾದ ಬಗ್ಗೆ ಚರ್ಚೆ ನಡೆಸಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಇಂದು ಕೆಆರ್ಎಸ್, ಕಬಿನಿ ಮತ್ತು ಕೊಡಗಿನ ಹಾರಂಗಿ ಜಲಾಶಯದ ವೈಮಾನಿಕ ಸಮೀಕ್ಷೆ ನಡೆಸಿದರು.
ಹೆಲಿಕಾಪ್ಟರ್ನಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಸೋಮವಾರ ಸುಪ್ರೀಂ ಕೋರ್ಟ್ನಿಂದ ಕರ್ನಾಟಕದ ವಿರುದ್ಧವಾಗಿ ಆದೇಶ ಬಂದರೆ ತಮಿಳುನಾಡಿಗೆ ಹೋಗಿ ಸಿಎಂ ಜಯಲಲಿತಾ ಜೊತೆ ಮಾತನಾಡುತ್ತೇನೆ. ಜಲಾಶಯದ ವಸ್ತು ಸ್ಥಿತಿಯನ್ನು ವಿವರಿಸುತ್ತೇನೆ ಎಂದು ಹೇಳಿದರು.
ಕೆಆರ್ಎಸ್ ಮತ್ತು ಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪ್ರತಿಭಟನೆಯಲ್ಲಿ ಯಾರನ್ನೂ ತಿಥಿ ಮಾಡುವ ಕೆಲಸಕ್ಕೆ ಮುಂದಾಗಬಾರದು. ನಾನು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಪ್ರತಿಭಟನೆ ನಿಲ್ಲಿಸಬೇಡಿ. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಹೇಳಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯಕ್ಕೂ ಭೇಟಿ ನೀಡಿ ನೀರಿನ ಪ್ರಮಾಣದ ಬಗ್ಗೆ ಪರೀಶೀಲನೆ ನಡೆಸಿ, ಅಧಿಕಾರಿಗಳಿಂದ ನೀರಿನ ಸಂಗ್ರಹದ ಸಂಪೂರ್ಣ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು ಕಾವೇರಿ ನೀರಿನ ವಿಚಾರದಲ್ಲಿ ಸಾಕಷ್ಟು ಸಂಘರ್ಷಗಳಾಗಿರುವುದರಿಂದ ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸುಪ್ರೀಂಕೋರ್ಟ್ನ ತೀರ್ಪಿನಿಂದಾಗಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ನಾಯಕರುಗಳು ವಿಫಲರಾಗಿದ್ದಾರೆ. ರಾಜ್ಯದ ಸ್ಥಿತಿಗತಿಯನ್ನು ಈ ವೇಳೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಹೇಮಾವತಿಯಲ್ಲಿಯೂ ನೀರಿಲ್ಲ. 2.78 ಲಕ್ಷ ಹೆಕ್ಟೆರ್ನಲ್ಲಿ ಬಿತ್ತನೆ ಆಗಿಲ್ಲ. ರೈತರಿಗೆ ನೀರಿಲ್ಲ ಆದರೆ ನಿತ್ಯವೂ 8 ಸಾವಿರ ಕ್ಯೂಸೆಕ್ ನೀರುಬಿಡುತ್ತಿದ್ದೇವೆ. ನನ್ನ ಜಿಲ್ಲೆಯ ಜನತೆ ಎಷ್ಟು ಕಷ್ಟದಲ್ಲಿದ್ದಾರೆ ಎನ್ನುವುದು ನನಗೆ ಗೊತ್ತು. ನಷ್ಟಕ್ಕೊಳಗಾದ ರೈತರಿಗೆ ಎಕರೆಗೆ 25 ಸಾವಿರದಿಂದ 50ಸಾವಿರದವರೆಗೆ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
The post ರಾಜ್ಯದ ವಿರುದ್ಧ ಆದೇಶ ಬಂದರೆ ತಮಿಳುನಾಡಿಗೆ ಹೋಗಲಿದ್ದಾರೆ ಮಾಜಿ ಪ್ರಧಾನಿ appeared first on Kannada Public tv.