ನವದೆಹಲಿ: ರಾಜ್ಯದಲ್ಲಿ ನಡೆದ ಬಹುಕೋಟಿ ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ಗೃಹಸಚಿವರ ಸಲಹೆಗಾರ ಕೆಂಪಯ್ಯರನ್ನು ಇವತ್ತು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ.
ನವದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ವಿಚಾರಣೆ ನಡೆದಿದೆ. ಇಬ್ಬರನ್ನು ಪ್ರತ್ಯೇಕ ಕೊಠಡಿಗಳಲ್ಲಿ ವಿಚಾರಣೆಗೆ ಒಳಪಡಿಸಿರುವ ಸಿಬಿಐ ಅಧಿಕಾರಿಗಳು ಸುಮಾರು 50 ರಿಂದ 60 ಪ್ರಶ್ನೆಗಳಿಗೆ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಲಾಟರಿ ಘಟಕದ ಅಂದಿನ ಮುಖ್ಯಸ್ಥರಾದ ಪದ್ಮನಯನ ಅವರು ತಾವು ಒತ್ತಡ ಮೇಲೆ ದೂರು ದಾಖಲಿಸಿರುವುದಾಗಿ ಹೇಳಿದ್ದರು. ಅಲ್ಲದೇ ಒತ್ತಡ ಹೇರಿದ್ದ ಅಧಿಕಾರಿಗಳು ಮತ್ತು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ಒತ್ತಡ ಹೇರಿದ್ದರು ಎಂದು ಸಿಬಿಐನಲ್ಲಿ ದೂರಿದ್ದರು. ಈ ಹಿನ್ನಲೆಯಲ್ಲಿ ಡಿಜಿಪಿ ಓಂಪ್ರಕಾಶ್, ಕೆಂಪಯ್ಯ ಅವರನ್ನು ಅಧಿಕಾರಿಗಳು ಇವತ್ತು ವಿಚಾರಣೆಗೆ ಒಳಪಡಿಸಿದರು.
ಒಂದಂಕಿ ಲಾಟರಿ ಹಗರಣ ಮಾಧ್ಯಮಗಳಲ್ಲಿ ಬಿತ್ತರಗೊಂಡ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಅದರಂತೆ ಪ್ರಕರಣ ದಾಖಲಿಸಲಾಗಿದೆ ನಾವು ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಈ ಮೂವರು ಅಧಿಕಾರಿಗಳು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು 0 ದಿನಗಳ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಮೇಘರಿಕ್ ಅವರು ಕೂಡ ಹೇಳಿಕೆ ದಾಖಲಿಸಿದ್ದರು. ಒಂದಂಕಿ ಲಾಟರಿ ಪ್ರಕರಣದ ಪ್ರಮುಖ ಕಿಂಗ್ ಪಿನ್ ಪಾರಿರಾಜನ್ ಜೊತೆ ಪೊಲೀಸ್ ಅಧಿಕಾರಿಗಳು ನಿಕಟ ಸಂಬಂಧ ಹೊಂದಿದ್ದ ಆರೋಪದ ಮೇಲೆ ಐಜಿಪಿ ಅಲೋಕ್ಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಿಬಿಐ ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
The post ಒಂದಂಕಿ ಲಾಟರಿ ಹಗರಣ; ಸಿಬಿಐನಿಂದ ಕೆಂಪಯ್ಯ, ಡಿಜಿ ಓಂಪ್ರಕಾಶ್ ಡ್ರಿಲ್ಲಿಂಗ್ appeared first on Kannada Public tv.