ಗಾಂಧಿನಗರ: ಮುಂದಿನ ವರ್ಷ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮರಳಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಪಾಳೇಯದಲ್ಲಿ ತಂತ್ರಗಾರಿಕೆ ಆರಂಭಗೊಂಡಿದ್ದು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಆನಂದಿ ಬೆನ್ ಪಟೇಲ್ ಅವರನ್ನು ಪಟ್ಟದಿಂದ ಕೆಳಗಳಿಸಿದ್ದಾರೆ.
ಆನಂದಿಬೆನ್ ಅವರು ರಾಜ್ಯಪಾಲರನ್ನು ಬೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. 75ನೇ ವರ್ಷಕ್ಕೆ ಇನ್ನು ಕೆಲವೇ ದಿನಗಳಿರುವಾಗ ಆನಂದಿ ಬೆನ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವ ವಿಚಾರವನ್ನು ಆನಂದಿಬೆನ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ.
ಆನಂದಿ ಬೆನ್ ಪಟೇಲ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿ ಸಚಿವರಾಗಿರುವ ನಿತಿನ್ ಪಟೇಲ್ ಅವರನ್ನು ನೇಮಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚರ್ಚೆ ನಡೆಸಿದ್ದಾರೆ ಎನ್ನುವ ಸುದ್ದಿ ಮೇ ತಿಂಗಳಿನಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.
ಪ್ರಧಾನಿ ಪಟ್ಟಕ್ಕೆ ಏರಿದ ಮೇಲೆ ಮೋದಿ ತಮ್ಮ ಸ್ಥಾನ್ಕಕೆ ಆನಂದಿ ಬೆನ್ ಅವರನ್ನೇ ಕೂರಿಸಿದ್ದರು. ಆದರೆ ಪಟೇಲ್ ಸಮುದಾಯದ ಮೀಸಲಾತಿ ಹೋರಾಟ ಮತ್ತು ಇತ್ತೀಚಿನ ದಲಿತರ ಮೇಲಿನ ಹಲ್ಲೆ ಪ್ರಕರಣದಿಂದಾಗಿ ಗುಜರಾತ್ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು
ಪಟೇಲ್ ಸಮುದಾಯದ ಹೋರಾಟ ನಿರ್ವಹಣೆಯಲ್ಲಿ ಆನಂದಿ ಬೆನ್ ಎಡವಿದ ಕಾರಣ ಪಟೇಲರು ಬಿಜೆಪಿಯಿಂದ ದೂರವಾಗಿದ್ದರು. ದೂರವಾದ ಪಟೇಲರನ್ನು ಮರಳಿ ಬಿಜೆಪಿಯತ್ತ ಸೆಳೆಯಲು ಈ ಸಮುದಾಯದ ವ್ಯಕ್ತಿಯೊಬ್ಬರನ್ನು ಆರಿಸಲು ಬಿಜೆಪಿ ಚರ್ಚಿಸಿದೆ ಎಂದು ಹೇಳಲಾಗುತ್ತಿದೆ.
1998ರಿಂದ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಹುದ್ದೆಯಿಂದ ಆನಂದಿ ಬೆನ್ ಕೆಳಗಳಿಸಿ ಅವರನ್ನು ಮುಂದೆ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆಯಿದೆ. ನವೆಂಬರ್ ತಿಂಗಳಿನಲ್ಲಿ 75ನೇ ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಆನಂದಿಬೆನ್ ಫೇಸ್ಬುಕ್ ಪೇಜ್ನಲ್ಲಿ ಹೇಳಿದ್ದಾರೆ.
The post ಗುಜರಾತ್ ಸಿಎಂ ಆನಂದಿ ಬೆನ್ ರಾಜೀನಾಮೆ appeared first on Kannada Public tv.