ನವದೆಹಲಿ: ನೋಟ್ಬ್ಯಾನ್ ಮಾಡಿ 50 ದಿನದಲ್ಲಿ ಎಲ್ಲಾ ಸರಿ ಮಾಡ್ತೇನೆ ಅಂತ ವಾಗ್ದಾನ ನೀಡಿರುವ ಪ್ರಧಾನಿ ಮೋದಿಗೆ ಇನ್ನು ನಾಲ್ಕೇ ದಿನ ಗಡುವು. ಪರಿಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಆರ್ಥಿಕವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಪ್ರಧಾನಿ ಮೋದಿ ವಿರುದ್ಧ ಈಗ ಸ್ಟ್ರೈಕ್ ಮಾಡಿವೆ.
ಮೋದಿ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ `ಸೂಪರ್ ಎಮರ್ಜೆನ್ಸಿ’ ಶುರುವಾಗಿದೆ. ಕಳೆದ 50 ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ನೋಟ್ ಬ್ಯಾನ್ ಅನ್ನೋದು ಸ್ವತಂತ್ರ್ಯ ಭಾರತದ ಅತೀ ದೊಡ್ಡ ಹಗರಣ. ಒಂದು ವೇಳೆ ನೋಟ್ಬ್ಯಾನ್ ಸಮಸ್ಯೆ ಹೀಗೆ ಮುಂದುವರಿದ್ರೆ ಮೋದಿ ರಾಜೀನಾಮೆ ಕೊಡ್ತಾರಾ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
ನೋಟ್ಬ್ಯಾನ್ನಿಂದ ದೇಶದ ಜಿಡಿಪಿಗೆ ಹೊಡೆತ ಬಿದ್ದಿದೆ, ಬ್ಯಾಂಕಿಂಗ್ ವ್ಯವಸ್ಥೆಯೂ ಧ್ವಂಸಗೊಂಡಿದೆ. ನೋಟ್ಬ್ಯಾನ್ನಿಂದ ದೇಶದ ಒಕ್ಕೂಟ ವ್ಯವಸ್ಥೆ ಛಿದ್ರಛಿದ್ರವಾಗಿದೆ. ಜನ ಹಸಿವಿನಿಂದ ಸಾಯ್ತಿದ್ದಾರೆ. ನೋಟ್ಬ್ಯಾನ್ ಮಾಡೋದಕ್ಕಿಂತ ಮುಂಚೆ ಮೋದಿ ಸಂಸತ್ನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತಾ ಆರೋಪಿಸಿದ್ರು. ಅಲ್ಲದೇ ಸರ್ಕಾರಿ ಸಂಸ್ಥೆಗಳನ್ನ ಮೋದಿ ಸರ್ಕಾರ ದುರುಪಯೋಗ ಮಾಡಿಕೊಳ್ತಿದೆ. ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದ್ರೂ ಮೋದಿ ಮೌನವಾಗಿರೋದು ಯಾಕೆ ಅಂತಾ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ರು.
ರಾಹುಲ್ ಗಾಂಧಿ ಸಹರಾ ಡೈರಿಯಲ್ಲಿ ಮೋದಿ ಹೆಸರಿದ್ದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡಿದ್ರು. ಆದ್ರೆ, ಮೋದಿ ವಿರುದ್ಧದ ಸಮರದಲ್ಲಿ ಪ್ರತಿಪಕ್ಷಗಳಲ್ಲೇ ಒಡಕು ಮೂಡಿವೆ. ಎಡಪಕ್ಷಗಳು, ಎಸ್ಪಿ, ಬಿಎಸ್ಪಿ, ಜೆಡಿಯು, ಎನ್ಸಿಪಿ ಪಕ್ಷಗಳು ಸುದ್ದಿಗೋಷ್ಟಿಯಿಂದ ದೂರ ಉಳಿದಿದ್ದವು.
ಪ್ರತಿಪಕ್ಷಗಳು ಪ್ರಧಾನಿಯ ರಾಜೀನಾಮೆ ಕೇಳ್ತಿವೆ. ಆದ್ರೆ, ಇಡೀ ದೇಶವೇ ಪ್ರಧಾನಿ ಬೆನ್ನಿಗಿದೆ ಅಂತ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತ್ಯುತ್ತರ ನೀಡಿದ್ರು. ಈ ಮಧ್ಯೆ, ಕೇಂದ್ರ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಜನವರಿ 5 ಮತ್ತು 8 ರಂದು ಪ್ಲಾನ್ ಮಾಡಿದೆ.
ಹಣಕ್ಕೆ ಲೆಕ್ಕವಿದೆ: ಕಾಳಧನಿಕರ ಮೇಲೆ ಬೇನಾಮಿ ಕಾಯ್ದೆಯ ಅಸ್ತ್ರ ಪ್ರಯೋಗಿಸೋದಾಗಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಬಿಎಸ್ಪಿ ಬ್ಯಾಂಕ್ ಖಾತೆಗೆ 102 ಕೋಟಿ ರೂಪಾಯಿ ಹಾಗೂ ಮಾಯಾವತಿ ಸೋದರ ಆನಂದಕುಮಾರ್ ಖಾತೆಗೆ 1.43 ಕೋಟಿ ಹಣ ಜಮೆ ಆಗಿರೋದನ್ನ ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಸಮನ್ಸ್ ನೀಡಿದೆ.
ಈ ಬಗ್ಗೆ ಸಿಡಿದೆದ್ದಿರೋ ಮಾಯಾವತಿ, ಡೆಪಾಸಿಟ್ ಆಗಿರೋ ಪ್ರತಿಪೈಸೆಗೂ ಲೆಕ್ಕವಿದೆ. ನಿಮ್ಮ ಪಕ್ಷದ ಖಾತೆಗೆ ಎಲ್ಲಿಂದ ಹಣ ಬಂತು ಅನ್ನೋದನ್ನ ಬಹಿರಂಗ ಪಡಿಸಿ. ಅಧಿಕಾರ ದುರುಪಯೋಗ ಪಡಿಸಿಕೊಳ್ತಿರೋ ಮೋದಿ, ಚುನಾವಣೆ ಹೊಸ್ತಿನಲ್ಲಿ ನನ್ನ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಮೊದಲಿಗೆ ಬಿಜೆಪಿ ಶುದ್ಧಹಸ್ತವಾಗಲಿ. ಬಿಜೆಪಿಯವರು ದಲಿತ ವಿರೋಧಿಗಳು ಅಂತ ಕೆಂಡಕಾರಿದ್ದಾರೆ.
ಆದ್ರೆ, ಮಾಯಾವತಿ ಅವ್ರು `ದಲಿತ ಕಾರ್ಡ್’ ಪ್ಲೇ ಮಾಡ್ತಿದ್ದಾರೆ. ಅಕ್ರಮ ಮಾಡಿದವರು ದಲಿತರು ಅಂತ ಹೇಳಿಕೊಂಡು ಭ್ರಷ್ಟಾಚಾರವನ್ನ ಮುಚ್ಚಿಡಬಹುದೇ ಅಂತ ಅಂತ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.