ಪುಣೆ: 23 ವರ್ಷದ ಸಾಫ್ಟವೇರ್ ಎಂಜಿನಿಯರನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಪುಣೆಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಅಂತರಾ ದಾಸ್ ಎಂದು ಗುರುತಿಸಲಾಗಿದೆ. ಅಂತರಾ ಕ್ಯಾಪ್ಜಿಮಿನಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆಫೀಸ್ನ ಕೂಗಳತೆ ದೂರದಲ್ಲೇ ಈ ಕೊಲೆ ನಡೆದಿದೆ. ಶನಿವಾರದಂದು ಯುವತಿ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಆಕೆಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು ಎಂದು ವಿವರಿಸಿದ್ದಾರೆ.
ದುಷ್ಕರ್ಮಿಗಳ ದಾಳಿಗೊಳಗಾದ ಅಂತರಾ ಕತ್ತಿನಿಂದ ರಕ್ತ ಸುರಿಯುತ್ತಿದ್ದುದನ್ನು ವಾಹನ ಸವಾರರು ನೋಡಿದ್ದಾರೆ. ಕೊನೆಗೆ ಇಬ್ಬರು ಸ್ಥಳಕ್ಕೆ ಧಾವಿಸಿ ಅಂತರಾ ಅವರನ್ನು ಹತ್ತಿರದ ಧನ್ವಂತರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂತರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಲೆಗೆ ಕಾರಣಬವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಅಂತರಾ ಪೋಷಕರಿಂದ ಮಾಹಿತಿ ಪಡೆದಿದ್ದು, ಕೊಲೆಗಾರನ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.