ರಾಯಚೂರು: ಪ್ರಧಾನಿ ನರೇಂದ್ರ ಮೋದಿ 500, 1000 ರೂಪಾಯಿ ನೋಟು ರದ್ದು ಮಾಡಿರುವುದು ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೇಲೂ ಪರಿಣಾಮ ಬೀರಿದೆ. ದೇಣಿಗೆ ಸಂಗ್ರಹದ ಮೇಲೆ ನೇರವಾಗಿ ಹೊಡೆತ ಬಿದ್ದಿದ್ದು ನಿರೀಕ್ಷೆಗಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಹಣ ಸಂಗ್ರವಾಗಿದೆ.
ರಾಯಚೂರಿನಲ್ಲಿ ಡಿಸೆಂಬರ್ 2ರಿಂದ ಮೂರು ದಿನ ಅದ್ದೂರಿಯಾಗಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಹಾಗೂ ಕಸಾಪ ಸುಮಾರು 2 ಕೋಟಿ ರೂಪಾಯಿ ದೇಣಿಗೆ ನಿರೀಕ್ಷಿಸಿತ್ತು. ಆದ್ರೆ ಆ ನಿರೀಕ್ಷೆ ಸುಳ್ಳಾಗಿದ್ದು, ಕೇವಲ 46 ಲಕ್ಷ ರೂಪಾಯಿ ಮಾತ್ರ ದೇಣಿಗೆ ಸಂಗ್ರಹವಾಗಿದೆ.
ಅಕ್ಷರ ಜಾತ್ರೆಗೆ ಪ್ರತೀದಿನ 35 ರಿಂದ 40 ಸಾವಿರ ಜನ ಬರುವ ನಿರೀಕ್ಷೆಯಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ನೋಟ್ ಬ್ಯಾನ್ ಬಿಸಿ ತಪ್ಪಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. 400 ಪುಸ್ತಕ ಮಳಿಗೆ, 86 ಚಿತ್ರಕಲಾ ಮಳಿಗೆ, 150 ಇತರೆ ವಾಣಿಜ್ಯ ಮಳಿಗೆಗಳ ವ್ಯವಸ್ಥೆ ಮಾಡಲಾಗ್ತಿದ್ದು, ಪುಸ್ತಕ ಕೊಳ್ಳುವ ಕನ್ನಡಾಭಿಮಾನಿಗಳಿಗೂ ಚಿಲ್ಲರೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕೃಷಿ ವಿವಿಯಲ್ಲಿ 4 ಮೈಕ್ರೋ ಎಟಿಎಂಗಳು, 5 ಮಳಿಗೆಗಳಲ್ಲಿ ಸ್ವೈಪಿಂಗ್ ಯಂತ್ರಗಳನ್ನ ಅಳವಡಿಸಲಾಗ್ತಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ತಿಳಿಸಿದ್ದಾರೆ
ಸರ್ಕಾರ ಅಕ್ಷರ ಜಾತ್ರೆಗೆ ಎರಡು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಜಿಲ್ಲಾ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನೂ ಸಮ್ಮೇಳನಕ್ಕೆ ಬಳಸಲಾಗ್ತಿದೆ. ಆದ್ರೂ ನೋಟ್ ಬ್ಯಾನ್ ಅಕ್ಷರ ಜಾತ್ರೆಗೆ ದೊಡ್ಡ ಪೆಟ್ಟು ನೀಡಿದೆ. ಇದನ್ನೆಲ್ಲಾ ಸಂಭಾಳಿಸಿ ಅಕ್ಷರ ಜಾತ್ರೆ ಯಶಸ್ವಿಗೊಳಿಸೋದು ಸರ್ಕಾರಕ್ಕೆ ಒಂದು ಸವಾಲೇ ಸರಿ ಎಂದು ರಾಯಚೂರು ಗ್ರಾಮೀಣ ಶಾಸಕರಾದ ತಿಪ್ಪರಾಜು ಹವಾಲ್ದಾರ್ ಹೇಳಿದರು.