– ಅನಿಲ್ ಕುಟುಂಬದಲ್ಲೂ ನೀರವ ಮೌನ
ಬೆಂಗಳೂರು: ಸೋಮವಾರ ಮಧ್ಯಾಹ್ನ ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಮೃತಪಟ್ಟ ಖಳನಟ ಉದಯ್ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಉದಯ ತಾಯಿ ಕೌಸಲ್ಯ, ಚಿಕ್ಕಪ್ಪ ಶ್ರೀನಿವಾಸ್, ಸಹೋದರಿ ಸುಧಾ ಸೇರಿದಂತೆ ಕುಟುಂಬಸ್ಥರು ಉದಯ್ ಅವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಉದಯ್ ವಾಸವಿದ್ದ ಕಾಲೋನಿಯಲ್ಲೂ ದುಃಖದ ವಾತವರಣ ನಿರ್ಮಾಣವಾಗಿದೆ.
ನಮ್ಮ ಗೋಳು ಯಾರೂ ಕೇಳಿಲ್ಲ ಅಂತ ಉದಯ್ ತಾಯಿ ಕೌಸಲ್ಯ ಕಣ್ಣೀರಿಟ್ಟಿದ್ದಾರೆ. ತಮ್ಮ… ತಮ್ಮ… ಅಂತ ವಿಜಯ್ ಕರೆಯುತ್ತಿದ್ದ. ತಮ್ಮನನ್ನೆ ನೀರಿಗೆ ತಳ್ಳಿದ್ದಾನೆ. ನನ್ನ ಮಗನಿಗೆ ಈಜು ಬರುತ್ತಿರಲಿಲ್ಲ. ಜ್ವರ ಬೇರೆ ಇತ್ತು. ಅದರ ಜೊತೆ ತಲೆಗೆ ಪೆಟ್ಟಾಗಿತ್ತು. ಬಲವಂತ ಮಾಡಿ ನಟನೆ ಮಾಡುವಂತೆ ನೀರಿಗೆ ತಳ್ಳಿದ್ದಾರೆ ಅಂತ ಉದಯ್ ತಾಯಿ ಕೌಸಲ್ಯ ಅಳಲು ತೋಡಿಕೊಂಡಿದ್ದಾರೆ.
ಉದಯ್ ಚಿಕ್ಕಪ್ಪ ಶ್ರೀನಿವಾಸ್ ಕೂಡ ಮಾಸ್ತಿಗುಡಿ ಚಿತ್ರತಂಡ ಹಾಗೂ ದುನಿಯಾ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಸಿನಿಮಾ ತಂಡದವರಿಗೆ ಮಾನವೀಯತೆ ಇಲ್ಲ. ಇಷ್ಟೆಲ್ಲ ದುರಂತ ನಡೆದರೂ ಯಾರೂ ಭೇಟಿ ನೀಡಿಲ್ಲ ಎಂದಿದ್ದಾರೆ.
ದುನಿಯಾ ವಿಜಯ್ ರನ್ನ ಬದುಕಿಸೋಕೆ ಬೋಟ್ ಇತ್ತು. ಆದ್ರೆ ನನ್ನ ತಮ್ಮ ಉದಯ್ನನ್ನ ಬದುಕಿಸೋಕೆ ಬೋಟ್ ಇರಲಿಲ್ವ? ನನ್ನ ತಮ್ಮ ಇನ್ನು ಬರೋದಿಲ್ಲ ಅಂತ ಉದಯ್ ಅಕ್ಕ ಸುಧಾ ಆಕ್ರಂದಿಸಿದ್ದಾರೆ. ನಮಗೆ ಉದಯ್ ನನ್ನ ಹುಡುಕಿಕೊಡಿ. ಕಂಡೋರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡೋರು ನೀವು ಅಂತ ಚಿತ್ರತಂಡದ ವಿರುದ್ಧ ಉದಯ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಬೆಂಗಳೂರಿನ ಕದಿರೇನಹಳ್ಳಿಯಲ್ಲಿರುವ ನಟ ಅನಿಲ್ ಮನೆಯಲ್ಲೂ ನೀರವ ಮೌನ ಆವರಿಸಿದ್ದು, ಕುಟುಂಬವರ್ಗದ ಆಕ್ರಂದನ ಮುಗಿಲು ಮುಟ್ಟಿದೆ.