– ಬರದಲ್ಲೂ ಪ್ರಾಣಿ-ಪಕ್ಷಿಗಳಿಗೆ ಭರ್ಜರಿ ಆಹಾರ
ಕೋಲಾರ: ಮನುಷ್ಯರು ನಾವು ಎಷ್ಟು ಸ್ವಾರ್ಥಿಗಳು ಅಂದ್ರೆ, ನಮ್ಮ ತೋಟಗಳಲ್ಲಿ ಹಣ್ಣು-ಹಂಪಲು ತಿಂದು ಬದುಕೋ ಪ್ರಾಣಿ-ಪಕ್ಷಿಗಳನ್ನ ಸಿಕ್ಕಾಪಟ್ಟೆ ಐಡಿಯಾ ಮಾಡಿ ಓಡಿಸ್ಬಿಡ್ತೇವೆ. ಆದ್ರೆ. ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಮರಾಠ ಹೊಸಹಳ್ಳಿ ಗ್ರಾಮದ ರೈತ ಜಿ.ಬಿ.ರೆಡ್ಡಿ ಮಾತ್ರ ಪ್ರಾಣಿ-ಪಕ್ಷಿಗಳಿಗೆ ಅನ್ನದಾತರಾಗಿದ್ದಾರೆ.
ಜಿ.ಬಿ.ರೆಡ್ಡಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ವಿವಿಧ ಬಗೆಯ ಹಣ್ಣಿನ ಗಿಡ ನೆಟ್ಟು, ಟ್ಯಾಂಕರ್ ಮೂಲಕ ನೀರು ಹರಿಸ್ತಿದ್ದಾರೆ. ಮಾವು, ನೇರಳೆ, ದಾಳಿಂಬೆ, ಹಲಸು, ನಿಂಬೆ ಸೇರಿದಂತೆ 15ಕ್ಕೂ ಹೆಚ್ಚು ಬಗೆಯ ಹಣ್ಣು ಗಿಡಗಳನ್ನ ಬೆಳೆದಿದ್ದು, ಯಾವುದೇ ಹಣ್ಣನ್ನ ಮಾರಾಟ ಮಾಡದೆ ಪ್ರಾಣಿ-ಪಕ್ಷಿಗಳಿಗಾಗಿಯೇ ಬಿಟ್ಟಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ರೆಡ್ಡಿ ಸೌದೆ ಮಾರಾಟ ಮಾಡಿ ಬದುಕ್ತಿದ್ರಂತೆ. ಆದ್ರೆ ಒಮ್ಮೆ ಅಮರನಾಥ ಯಾತ್ರೆಗೆ ಹೋಗಿದ್ದಾಗ ಅನಾರೋಗ್ಯಕ್ಕೀಡಾಗಿದ್ದರು. ಆಗ ಅಲ್ಲಿಯ ಸ್ವಾಮೀಜಿಯೊಬ್ಬರು ಮರಗಳನ್ನ ನಾಶ ಮಾಡಿ ಸಾಕಷ್ಟು ಪಾಪ ಮಾಡಿದ್ದೀರಿ ಎಂದಿದ್ದಾರೆ. ಇದರ ಪಾಪಪ್ರಜ್ಞೆ ಅರಿತ ರೆಡ್ಡಿಯವರು ಸ್ವಾಮೀಜಿ ಮಾತಿನಂತೆ ಹಣ್ಣಿನ ಗಿಡ-ಮರಗಳನ್ನ ಬೆಳೆದು ಪ್ರಾಣಿ-ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ. ರೆಡ್ಡಿಯವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.
ಸಾವಿರಾರು ರೂಪಾಯಿ ವ್ಯಯ ಮಾಡಿ, ಟ್ಯಾಂಕರ್ ಮೂಲಕ ನೀರು ಹಾಯಿಸಿ, ಪ್ರಾಣಿ-ಪಕ್ಷಿಗಳಿಗೆ ಹಣ್ಣು ಸಿಗುವಂತೆ ಮಾಡಿರೋ ರೆಡ್ಡಿ ನಿಜವಾಗ್ಲೂ ಪಬ್ಲಿಕ್ ಹೀರೋನೇ.