ಹಾಸನ: ಮಂಡ್ಯದಲ್ಲಿ ನವಜಾತ ಹೆಣ್ಣು ಶಿಶುವೊಂದು ತನ್ನದಲ್ಲದ ತಪ್ಪಿಗೆ ನಾಯಿದಾಳಿಗೆ ಸಿಕ್ಕಿ ಅನಾಥ ಶವವಾಗಿದ್ದರೆ, ಹಾಸನದಲ್ಲಿ ಸ್ಥಳೀಯರು ಮತ್ತು ಜಿಲ್ಲಾಸ್ಪತ್ರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ನವಜಾತ ಹೆಣ್ಣು ಶಿಶುವೊಂದು ಮರುಹುಟ್ಟು ಪಡೆದಿದೆ.
ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆ ರಸ್ತೆಯ ಪೊದೆಯೊಂದರಲ್ಲಿ ಕಳೆದ ಜುಲೈ 13 ರಂದು ಹೆಣ್ಣು ಮಗು ಚೀರಾಡುವ ದನಿ ಕೇಳುತ್ತಿತ್ತು. ಯಾರೋ ಮಗುವನ್ನು ಪೊದೆಯಲ್ಲಿ ಬಿಸಾಡಿ ಹೋಗಿದ್ದರು. ಅನಾಥ ಮಗುವನ್ನು ನವಿಲು ಕುಕ್ಕಿ ಕುಕ್ಕಿ ಕಚ್ಚಿದ್ದರಿಂದ ಮಗು ದೇಹದ ಬಹುತೇಕ ಭಾಗದಲ್ಲಿ ಗಾಯಗಳಾಗಿ ರಕ್ತ ಸೋರುತ್ತಿತ್ತು. ಇದನ್ನು ಆಲಿಸಿದ ಕೂಲಿ ಕಾರ್ಮಿಕ ಮಹಿಳೆ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು.
ಕೂಡಲೇ ಜಾಗೃತರಾದ ಜನರು, ಆಂಬುಲೆನ್ಸ್ ಮೂಲಕ ಮಗುವನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆಗ ಮಗು ತೀವ್ರ ಅಸ್ವಸ್ಥಗೊಂಡು, ಆರೋಗ್ಯ ಸ್ಥಿತಿ ವಿಷಮವಾಗಿತ್ತು. ಆತಂಕದ ವಿಷಯ ಎಂದ್ರೆ ಮಗುವಿನ ಶ್ವಾಸಕೋಶಕ್ಕೂ ಗಂಭೀರವಾದ ತೊಂದರೆಯಾಗಿತ್ತು. ಮಗುವನ್ನು ಉಳಿಸಿಕೊಳ್ಳಲು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ತಾಯಿ ಸ್ಥಾನದಲ್ಲಿ ಶುಶ್ರೂಷಕಿಯರು ಮಾಡಿದ ಆರೈಕೆಯಿಂದಾಗಿ 10 ದಿನಗಳ ಮಗು ಅದೃಷ್ಟವಶಾತ್ ಬದುಕುಳಿದಿದೆ.
ವಿಪರ್ಯಾಸ ಎಂದ್ರೆ ಹೋಗುವ ಜೀವವೇನೊ ಉಳಿದಿದೆ. ಆದರೆ, ಎಳೆಯ ಕಂದನ ಪಾಲಿಗೆ ನಿಜ ತಾಯಿ ಇಲ್ಲವಾಗಿದ್ದಾಳೆ.
ಇದನ್ನೂ ಓದಿ: ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನವಜಾತ ಹೆಣ್ಣು ಶಿಶುವನ್ನ ಆಸ್ಪತ್ರೆ ಆವರಣದಲ್ಲೇ ಕಚ್ಚಿ ಕೊಂದ ನಾಯಿಗಳು