ಯಾದಗಿರಿ: ಹೊರಗಡೆ ಸುತ್ತಾಡಲೆಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಪತಿ ತನ್ನ ಪತ್ನಿಯನ್ನ ಬೈಕ್ ನಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ನಡೆದಿದೆ.
ಅಶ್ವಿನಿ ಎಂಬವರೇ ಪತಿಯಿಂದ ಕೊಲೆಯಾದ ದುರ್ದೈವಿ. ಸಾಬಣ್ಣ ಎಂಬವನೇ ತನ್ನ ಪತ್ನಿಯನ್ನ ಕೊಲೆಗೈದ ಪತಿರಾಯ. ಅಶ್ವಿನಿ ಮತ್ತು ಸಾಬಣ್ಣ ಇಬ್ಬರಿಗೂ 6 ತಿಂಗಳ ಹಿಂದೆಯೇ ಮದುವೆಯಾಗಿತ್ತು. ಆದ್ರೆ ವರದಕ್ಷಿಣೆ ಆಸೆಗಾಗಿ ಸಾಬಣ್ಣ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಅಶ್ವಿನಿ ಅವರನ್ನು ಯರಗೋಳ ಗ್ರಾಮದ ನಿವಾಸ ಸಾಬಣ್ಣನೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ನಂತರ ನವದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ದಂಪತಿ ಶನಿವಾರ ಸ್ವಗ್ರಾಮ ಯರಗೋಳಕ್ಕೆ ಬಂದಿದ್ದರು. ಸಾಬಣ್ಣ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ.
ಸದ್ಯ ಪೊಲೀಸರು ಆರೋಪಿ ಸಾಬಣ್ಣನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.