ನವದೆಹಲಿ: ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಅಂತರ್ ರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಒಂದೇ ಹಾಗೂ ಶಾಶ್ವತ ನ್ಯಾಯಾಧಿಕರಣವನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇದರ ಜೊತೆಗೆ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೆಲವು ಪೀಠಗಳನ್ನು ಅಗತ್ಯಕ್ಕನುಗುಣವಾಗಿ ವಿವಾದಗಳನ್ನು ಬಗೆಹರಿಸುವಂತೆ ಮಾಡಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಕಾಯ್ದೆಗೆ ತಿದ್ದುಪಡಿ ತರುವ ಈ ನಿರ್ಧಾರಕ್ಕೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಇದರ ಪ್ರಸ್ತಾಪವಾಗಲಿದೆ.
ಪ್ರಸ್ತಾವನೆಯ ಪ್ರಕಾರ ಕೇವಲ ಒಂದೇ ಒಂದು ನ್ಯಾಯಾಧಿಕರಣವಿರಲಿದ್ದು ಅದಕ್ಕೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರು ನೇತೃತ್ವ ವಹಿಸಲಿದ್ದಾರೆ. ಸಂದರ್ಭ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಪೀಠಗಳನ್ನು ರಚಿಸಲಾಗುತ್ತದೆ. ಹಾಗೇ ವಿವಾದವು ಇತ್ಯರ್ಥವಾದ ಬಳಿಕ ಆ ಪೀಠ ಅಸ್ತಿತ್ವದಲ್ಲಿರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಹಿಂದೆ ಜಲ ವಿವಾದಗಳನ್ನು ಬಗೆಹರಿಸಿ ಅಂತಿಮ ತೀರ್ಪು ನೀಡಲು ಹಲವು ವರ್ಷ ಸಮಯ ಹಿಡಿಯುತ್ತಿತ್ತು. ಆದ್ರೆ ಈಗ ಪ್ರಸ್ತಾವನೆ ಸಲ್ಲಿಸಿರುವ ಪ್ರಕಾರ ನ್ಯಾಯಾಧಿಕರಣ 3 ವರ್ಷಗಳ ಅವಧಿಯಲ್ಲಿ ತೀರ್ಪು ನೀಡಲಿದೆ ಎಂದು ಶಶಿಶೇಖರ್ ಹೇಳಿದ್ರು.
ನ್ಯಾಯಾಧಿಕರಣದ ಜೊತೆಗೆ, ತಿದ್ದುಪಡಿಯಲ್ಲಿ ಡಿಸ್ಪ್ಯೂಟ್ ರೆಸಲ್ಯೂಷನ್ ಕಮಿಟಿ (ಡಿಆರ್ಸಿ) ಸ್ಥಾಪನೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ತಜ್ಞರು ಹಾಗೂ ಕಾರ್ಯನೀತಿ ರೂಪಿಸುವವರನ್ನೊಳಗೊಂಡ ಡಿಆರ್ಸಿ ನ್ಯಾಯಾಧಿಕರಣಕ್ಕೂ ಮೊದಲೇ ವಿವಾದವನ್ನು ಕೈಗೆತ್ತಿಕೊಳ್ಳಲಿದೆ. ರಾಜ್ಯಗಳು ಯಾವಾಗ ಮನವಿ ಮಾಡುತ್ತವೆಯೋ ಆಗ ಕೇಂದ್ರ ಡಿಆರ್ಸಿ ಸ್ಥಾಪನೆ ಮಾಡುತ್ತದೆ. ಡಿಆರ್ಸಿ ಹಂತದಲ್ಲೇ ಬಹುತೇಕ ವಿವಾದಗಳು ಬಗೆಹರಿಯಲಿದೆ ಎಂದುಕೊಂಡಿದ್ದೇವೆ. ಆದ್ರೆ ರಾಜ್ಯಕ್ಕೆ ಈ ಬಗ್ಗೆ ಅಸಮಾಧಾನವಿದ್ದರೆ ನ್ಯಾಯಾಧಿಕರಣದ ಮೊರೆ ಹೋಗಬಹುದು ಅಂತ ಶಶಿಶೇಖರ್ ತಿಳಿಸಿದ್ರು.
ಈಗಿರುವ 1956ರ ಕಾಯ್ದೆಯ ಪ್ರಕಾರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಕೇಂದ್ರಕ್ಕೂ ನ್ಯಾಯಾಧಿಕರಣವನ್ನು ರಚಿಸುವ ಅಗತ್ಯವಿದೆಯೆಂದು ಮನವರಿಕೆಯಾದ ನಂತರವಷ್ಟೇ ನ್ಯಾಯಾಧಿಕರಣವನ್ನು ರಚಿಸಲಾಗುತ್ತದೆ. ಸದ್ಯಕ್ಕೆ ಕಾವೇರಿ, ಮಹದಾಯಿ, ರವಿ ಆಂಡ್ ಬೀಸ್, ಕೃಷ್ಣಾ ನದಿ ವಿವಾದಗಳಿಗೆ ಸೇರಿದಂತೆ 8 ನ್ಯಾಯಾಧಿಕರಣಗಳಿವೆ.